ಮಂಡ್ಯ, 22 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯಲ್ಲಿ ಸಂಕಲ್ಪ ಸಮಾವೇಶ ಮಾಡಿದರು. ಆದರದು ಅಭಿವೃದ್ಧಿ ಸಂಕಲ್ಪ ಸಮಾವೇಶವಲ್ಲ. ಬಡವರನ್ನು ನಾಶ ಮಾಡುವ ಸಂಕಲ್ಪ ಸಮಾವೇಶವಾಗಿತ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಮನೆ ಪಡೆಯಲು ಅರ್ಜಿ ಬೇಡ, ಮುಖ್ಯಮಂತ್ರಿ ಮರ್ಜಿ ಇದ್ದರಷ್ಟೇ ಸಾಕು. ಇದು ಶೇ.60ರಷ್ಟು ಕಮೀಷನ್ ಸರಕಾರ. ಬೇಕಿದ್ದರೆ ದಾಖಲೆಗಳನ್ನು ಕೊಡುತ್ತೇನೆ. ವಸತಿ ಇಲಾಖೆಯಲ್ಲೂ ಮುಸ್ಲಿಂರಿಗೆ ಶೇ.15 ರಷ್ಟು ಮೀಸಲು ತರಲಾಗಿದೆ. ಟಿಪ್ಪು ವಂಶಜರಿಗೆ ಶೇ.15 ರಷ್ಟು ಮೀಸಲಾತಿ. ನಮ್ಮವರಿಂದ ಶೇ. 60 ರಷ್ಟು ಕಮೀಷನ್. ಇದೇ ಸರಕಾರದ ಸಾಧನೆ ಎಂದು ಟೀಕಿಸಿದರು.
“ನಾನು ಬಾಯಿ ಬಿಟ್ಟರೆ ಈ ಸರಕಾರ 3 ದಿನ ಉಳಿಯೋದಿಲ್ಲ” ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ಸರಕಾರಕ್ಕೆ ಇದಕ್ಕಿಂತಲೂ ಛೀಮಾರಿ ಬೇಕೆ? ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇವರಿಗೆ ಸರಕಾರ ನಡೆಸುವ ನೈತಿಕತೆ ಎಲ್ಲಿದೆ? ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ತಾಕತ್ತಿದ್ದರೆ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಪಾಟೀಲರ ವಿರುದ್ಧ ಕ್ರಮ ಕೈಗೊಳ್ಳಲಿ. ಇಲ್ಲವೇ ತಾವೇ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು. ನಮ್ಮ ಸರಕಾರದ ಬಗ್ಗೆ 40% ಕಮೀಷನ್ ಸರಕಾರ ಎಂದು ಆರೋಪಿಸಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 3 ತಿಂಗಳಲ್ಲಿ ನಮ್ಮನ್ನೆಲ್ಲಾ ಜೈಲಿಗೆ ಹಾಕುತ್ತೇನೆ ಎಂದಿದ್ದರು. ಈಗ ಸರಕಾರ ಬಂದು 2 ವರ್ಷವಾಗಿದೆ. ಏನು ಮಾಡಿದ್ದಾರೆ? ಶೇ.60 ರಷ್ಟು ಕಮಿಷನ್ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa