ಕೋಲಾರ, ೨೨ ಜೂನ್ (ಹಿ.ಸ) :
ಆ್ಯಂಕರ್ : ಹೆಸರಿಗೆ ಹಾಲು ಉತ್ಪಾದಕರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಾಗಿದೆ. ಹಳ್ಳಿಗಳಲ್ಲಿ ಹಸುಗಳ ಸಗಣಿ ಬಾಚಿ, ಮೇವು ಹಾಕಿ, ಹಾಲು ಕರೆದು ಡೈರಿಗೆ ಹಾಕುವ ಅನ್ನದಾತರು ಯಾರೂ ಸ್ಪರ್ಧೆಯಲ್ಲಿ ಇಲ್ಲ. ಬದಲಾಗಿ ಹಣಬಲ, ತೋಳ್ಬಲ ಇರುವವರು ಎಂದೂ ಸಗಣಿ ಬಾಚದ, ಹಸುಗಳಿಗೆ ಮೇವು ಹಾಕದ, ಹಾಲು ಕರೆಯದವರೇ ಈ ಚುನಾವಣೆಯ ಪ್ರತಿಷ್ಠಿತ ಅಭ್ಯರ್ಥಿಗಳಾಗಿದ್ದಾರೆ. ಮತದಾರರನ್ನು ಓಲೈಕೆ ಮಾಡಲು ಗಾಂಧಿ ನೋಟುಗಳ ಕಂತೆ ಕಂತೆ ನೋಟುಗಳು ವಿನಿಮಯವಾಗುತ್ತಿವೆ. ಜೊತೆಗೆ ಮದ್ಯಪಾನ ಹಾಗೂ ಬಾಡೂಟಗಳ ಭರ್ಜಿರಿ ಪಾರ್ಟಿಗಳು ನಡೆಯುತ್ತಿವೆ.
ಕೋಲಾರ ಜಿಲ್ಲೆಯ ಪ್ರತಿಷ್ಠ ಸಹಕಾರಿ ಸಂಸ್ಥೆಯಾದ ಕೋಲಾರ ಹಾಲು ಉತ್ದಾದಕರ ಸಂಸ್ಢೆಯಾದ ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ಼ಕ್ಕೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಡಿ.ಸಿ.ಸಿ ಬ್ಯಾಂಕ್ ಚುನಾಣೆಯ ನಂತರ ರಾಜಕೀಯ ಪಕ್ಷಗಳಿಗೆ ಸವಾಲು ಆಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಎದುರಿಸುವುದು ಸವಾಲು ಆಗಿದೆ. ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ದೊಡ್ಡ ಸಮಸ್ಯೆಯಾಗಿದೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿಯವರ ಬಣಗಳ ನಡುವೆ ರಾಜಕೀಯ ಸಮರ ತಾರಕ್ಕೆ ಏರಿದೆ. ಕಾಂಗ್ರೆಸ್ಗೆ ಎದುರಾಳಿ ಕಾಂಗ್ರೆಸ್ ಆಗಿದೆ. ಕೋಲಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಭಾರಿ ಅವ್ಯವಹಾರ ಆಗಿದೆ. ಒಕ್ಕೂಟವನ್ನು ಶುದ್ದೀಕರಿಸಬೇಕು ಎಂಬ ಉದ್ದೇಶದಿಂದ ಶಾಸಕ ಎಸ್. ಎನ್. ನಾರಾಯಣಸ್ವಾಮಿ ಒಕ್ಕೂಟದ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ನಾರಾಯಣಸ್ವಾಮಿ ಸ್ಪರ್ಧಿಸದಂತೆ ತಡೆಯಲು ಹಾಲು ಉತ್ಪಾದಕರ ಸಂಸ್ಥೆಯಿ0ದ ಪಡೆದಿದ್ದ ಡಿಲಿಗೇಟ್ನ್ನು ರದ್ದಪಡಿಸಲಾಗಿತ್ತು.ಬಿ.ಜೆ.ಪಿ ಮತ್ತು ಕಾಂಗ್ರೆಸ್ ಒಳಸಂಚು ನಡೆಸಿ ನಾರಾಯಣಸ್ವಾಮಿಯವರು ಒಕ್ಕೂಟದ ಚುನಾವಣೆಯಿಂದ ದೂರ ಉಳಿಯಬೇಕು ಎಂದು ಅವರಿಗೆ ನೀಡಲಾಗಿದ್ದ ಡಿಲಿಗೇಟ್ ರದ್ದುಪಡಿಸಲಾಗಿತ್ತು. ನಾರಾಯಣಸ್ವಾಮಿಯವರು ಹಾಲು ಉತ್ಪಾದಕರಲ್ಲ. ಅವರು ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡುತ್ತಿಲ್ಲ ಎಂಬ ಕಾರಣಕ್ಕಾಗಿ ಡಿಲಿಗೇಟ್ ರದ್ದುಪಡಿಸಲಾಗಿತ್ತು. ಸಂಘದ ಪರವಾಗಿ ಮತ ಚಲಾಯಿಸುವ ಹಕ್ಕು ಡಿಲಿಗೇಟ್ ಮೂಲಕ ನೀಡಲಾಗುವುದು. ಅಲ್ಲದೆ ಡಿಲಿಗೇಟ್ ಪಡೆದವರು ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು ನಾರಾಯಣಸ್ವಾಮಿಯವರ ಡಿಲಿಗೇಟ್ ರದ್ದುಪಡಿಸಿದ್ದ ಆದೇಶವನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿದ್ದಾರೆ. ಇದರಿಂದಾಗಿ ನಾರಾಯಣಸ್ವಾಮಿಯವರು ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡಿದ್ದಾರೆ.
ನಾರಾಯಣಸ್ವಾಮಿಯವರು ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ. ಕೋಲಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ ವ್ಯಾಪಕವಾದ ಅಕ್ರಮಗಳು ನಡೆದಿವೆ. ಮಾಲೂರು ಶಾಸಕ ನಂಜೇಗೌಡರು ಒಕ್ಕೂಟದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಿಬ್ಬಂದಿ ನೇಮಕಾತಿ ಸೇರಿದಂತೆ ಗೋಲ್ಡನ್ ಡೈರಿಯ ನಿರ್ಮಾಣ ಕಾಮಗಾರಿಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ಅಕ್ರಮಗಳ ತನಿಖೆಯಾಗಬೇಕೆಂದು ನಾರಾಯಣಸ್ವಾಮಿ ಹಲವು ಬಾರಿ ಒತ್ತಾಯಿಸಿದ್ದರು. ನಾರಾಯಣಸ್ವಾಮಿ ಮತ್ತು ನಂಜೇಗೌಡರು ಕಾಂಗ್ರೆಸ್ ಪಕ್ಚಕ್ಕೆ ಸೇರಿದವರಾಗಿದ್ದಾರೆ. ನಾರಾಯಣ ಸ್ವಾಮಿಯವರ ಈ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡಮಟ್ಟದ ಹಾನಿಯಾಗಿದೆ. ನಾರಾಯಣಸ್ವಾಮಿಯವರು ಒಕ್ಕೂಟದ ಚುನಾವಣೆಗೆ ಸ್ಪರ್ಧಿಸುವುದರ ಜೊತೆಗೆ ಕೆ.ಜಿ.ಎಫ್ ತಾಲೂಕಿನಲ್ಲಿ ಮತ್ತು ಮಹಿಳಾ ಕ್ಷೇತ್ರದಿಂದ ತಮ್ಮ ಬೆಂಬಲಿಗರನ್ನು ಅಧಿಕೃತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ವಿರುದ್ದ ಕಣಕ್ಕಿಳಿಸಿದ್ದಾರೆ. ತಮ್ಮನ್ನು ಮತ್ತು ಕೆ.ಜಿ.ಎಫ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜಯಸಿಂಹ ಕೃಷ್ಣಪ್ಪ ಸ್ಪರ್ಧೆ ಮಾಡಿದ್ದಾರೆ. ತಮ್ಮ ಬೆಂಬಲಿಗರನ್ನು ಬೆಳಸುವ ಉದ್ದೇಶದಿಂದ ಕೆ.ಜಿ ಎಫ್ ತಾಲ್ಲೂಕಿನಿಂದ ಲಕ್ಷಮಯ್ಯನವರು ಅನಿವಾರ್ಯವಾಗಿ ಸ್ಪರ್ಧಿಸಬೇಕಾಗಿದೆ . ಮಹಿಳಾ ಕ್ಷೇತ್ರದಿಂದ ಪ್ರತಿಭಾ ಅವರು ಸ್ಪರ್ಧಿಸಿರುವುದಾಗಿ ನಾರಾಯಣಸ್ವಾಮಿ ಸಮರ್ಥಿಸಿಕೊಂಡಿದ್ಧಾರೆ.
ಕಾಂಗ್ರೆಸ್ನವರು ಮತ್ತು ಜೆ.ಡಿ.ಎಸ್ನವರು ಪರಸ್ಪರ ಕಾದಾಡಬೇಕಿತ್ತು. ಆದರೆ ಕಾಂಗ್ರೆಸ್ನವರು ಅವರವರೇ ಬಹಿರಂಗವಾಗಿ ಕಾದಾಡುವುದರಿಂದ ಜೆ.ಡಿ.ಎಸ್ನವರಿಗೆ ಚುನಾವಣೆ ಎದುರಿಸುವುದು ಸುಲಭವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ವಿಪರೀತ ಬೆವರು ಸುರಿಸಬೇಕಾಗಿದೆ. ಪ್ರಾಥಮಿಕ ಸಹಕಾರ ಸಂಘಗಳಿ0ದ ಡಿಲಿಗೇಟ್ ಪಡೆದವರು ಮತಚಲಾಯಿಸುತ್ತಾರೆ. ಅವರು ಸುಲಭವಾಗಿ ಮತ ಚಲಾಯಿಸುವುದಿಲ್ಲ. ಒಂದು ಮತ ಐದು ಲಕ್ಷಗಳವರೆಗೆ ಮಾರಾಟವಾಗುತ್ತದೆ. ಗಾಂಧೀ ನೋಟಗಳ ಕಂತೆಗಳು ಪಾವತಿಯಾಗುತ್ತಿವೆ. ಅಷ್ಟೆ ಅಲ್ಲ, ಮತದಾರರಿಗೆ ತಮಿಳುನಾಡು ಕೇರಳ ಮತ್ತು ಗೋವಾ ಪ್ರವಾಸ ಏರ್ಪಡಿಸಲಾಗಿದೆ.
ಕೆ.ಜಿ.ಎಫ್ ತಾಲ್ಲೂಕಿನ ಜಯಸಿಂಹ ಕೃಷ್ಣಪ್ಪ ಇದುವರೆಗೂ ಎಂಟು ಬಾರಿ ಆಯ್ಕೆಯಾಗಿದ್ದು ಒಂಬತ್ತನೇ ಬಾರಿ ಸ್ಪರ್ಧಿಸಿದ್ದಾರೆ. ಅವರು ಮತದಾರರನ್ನು ಓಲೈಕೆ ಮಾಡಲು ಪ್ರವಾಸಕ್ಕೆ ಕಳುಹಿಸಿದ್ದಾರೆ. ಮೂರನೇ ಬಾರಿ ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಿರುವ ಡಿ. ವಿ. ಹರೀಶ್ ಅವರು ಕಾಂಗ್ರೆಸ್ ಪಕ್ಷದ ಅವರ ಒಂದು ಕಾಲದ ಗೆಳೆಯ ಸೀಸಂದ್ರ ಗೋಪಾಲ್ಗೌಡ ಹಾಗು ಬ್ಯಾಲಹಳ್ಳಿ ಶಂಕರೇಗೌಡರಿ0ದ ಸ್ಪರ್ಧೆ ಎದುರಿಸಬೇಕಾಗಿದೆ.
ಬ್ಯಾಲಹಳ್ಳಿ ಶಂಕರೇಗೌಡರು ಜೆಡಿಎಸ್ ಬೆಂಬಲದಿ0ದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಜೆಡಿಎಸ್ ಡಿ.ವಿ.ಹರೀಶ್ಗೆ ಬೆಂಬಲ ಘೋಷಿಸಿದೆ. ಇದರಿಂದಾಗಿ ಶಂಕರೇಗೌಡ ಹರೀಶ್ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ ಮತ್ತು ಇತರ ಮುಖಂಡರು ಮಾಡಿರುವ ಮನವಿಯನ್ನು ತಿರಸ್ಕರಿಸಿದ್ಧಾರೆ. ಮುಂದೆ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್ ಟಿಕೇಟ್ ನೀಡಲಾಗುವುದು ಎಂದು ಆಸ್ವಾಸನೆ ನೀಡಲಾಗಿತ್ತು. ಆದರೆ ಯಾವುದೇ ಮನವಿ ಮತ್ತುಆಶ್ವಾಸನೆಗೆ ಜಗ್ಗದೆ ಬ್ಯಾಲಹಳ್ಳಿ ಶಂಕರೇಗೌಡ ಕಣದಲ್ಲಿ ಉಳಿದಿದ್ದಾರೆ. ಅವರಿಗೆ ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ಬೆಂಬಲ ಇದೆ.
ಮೊದಲ ಬಾರಿಗೆ ಹತ್ತು ವರ್ಷಗಳ ಹಿಂದೆ ಸ್ಪರ್ಧಿಸಿದಾಗ ಮತದಾರರಿಗೆ ಬುಲೆಟ್ ದ್ವಿಚಕ್ರವಾಹನ ಉಡುಗೋರೆಯಾಗಿ ನೀಡಿದ್ದರು. ಈ ಬಾರಿ ತಮ್ಮ ಕೋಳಿ ಫಾರಂ ಅತಿಥಿ ಗೃಹದಲ್ಲಿ ಮತದಾರರಿಗೆ ಆತಿಥ್ಯ ನೀಡುತ್ತಿದ್ದಾರೆ. ಒಕ್ಕೂಟದ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣ ಸುರಿಯುತ್ತಿದ್ದಾರೆ.
ಚಿತ್ರ : ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ಕೇಂದ್ರ ಕಚೇರಿ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್