ಹುಬ್ಬಳ್ಳಿ ನಗರದ ಸ್ವಚ್ಛತೆಗೆ ಜಿಲ್ಲಾ ಉಸ್ತವಾರಿ ಸಚಿವರ ಕಾರ್ಯಾಚರಣೆ
ಹುಬ್ಬಳ್ಳಿ, 22 ಜೂನ್ (ಹಿ.ಸ.) : ಆ್ಯಂಕರ್ : ಧಾರವಾಡ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್ , ಇಂದು ಹುಬ್ಬಳ್ಳಿ ನಗರದ ಸಿದ್ದಾರೂಡ ಮಠ, ಆರೂಢ ನಗರ, ಗಣೇಶನಗರ, ಆನಂದನಗರ ಸರ್ಕಲ್, ರಾಮಲಿಂಗೇಶ್ವರ ನಗರ, ಗಾಂಧಿವಾಡ, ಕೇಶ್ವಾಪುರ ಸೇರಿದಂತೆ ನಗರದ ಪ್ರದೇಶಗಳಿಗೆ ಭೇಟಿ ನೀಡಿ, ಪೌರಕಾರ್ಮಿಕರೊಂದಿಗೆ ಸ್ವಚ್ಛ
Cleaning


ಹುಬ್ಬಳ್ಳಿ, 22 ಜೂನ್ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್ , ಇಂದು ಹುಬ್ಬಳ್ಳಿ ನಗರದ ಸಿದ್ದಾರೂಡ ಮಠ, ಆರೂಢ ನಗರ, ಗಣೇಶನಗರ, ಆನಂದನಗರ ಸರ್ಕಲ್, ರಾಮಲಿಂಗೇಶ್ವರ ನಗರ, ಗಾಂಧಿವಾಡ, ಕೇಶ್ವಾಪುರ ಸೇರಿದಂತೆ ನಗರದ ಪ್ರದೇಶಗಳಿಗೆ ಭೇಟಿ ನೀಡಿ, ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯಕ್ಕೆ ತಮ್ಮ ಕೈ ಜೋಡಿಸಿ, ನಾಗರಿಕರಿಗೆ, ಅಧಿಕಾರಿಗಳಿಗೆ ಅವರ ಕರ್ತವ್ಯಗಳನ್ನು ನೆನಪಿಸಿದರು.

ಸಚಿವ ಸಂತೋಷ ಲಾಡ ಅವರು ಸ್ವತಃ, ತ್ಯಾಜ್ಯದ ಕಸ ತುಂಬುವ, ಚರಂಡಿ ಸ್ವಚ್ಛಗೊಳಿಸುವ, ಪರಿಕರಗಳಿಂದ ತ್ಯಾಜ್ಯ ತುಂಬುವ ಮೂಲಕ ಅವರು, ಎಲ್ಲೆಂದರಲ್ಲಿ ಕಸ,ಮುಸುರೆ, ತ್ಯಾಜ್ಯ ಚೆಲ್ಲಿ ಹೊಲಸು ಮಾಡುವ ನಾಗರಿಕರು ನಾಚಿ ನಿಲ್ಲುವಂತೆ, ಅಧಿಕಾರಿ- ಸಿಬ್ಬಂದಿಗಳು ತಮ್ಮನ್ನು ತಾವು ಪುನರಾವಲೋಕನ ಮಾಡಿಕೊಳ್ಳುವಂತೆ ಮಾಡಿದರು.

ಇಂದಿನ ಈ ಕಾರ್ಯಕ್ರಮ ಪೋಜ್ ಕೊಡಲು ಅಥವಾ ಪಿಕನಿಕ್ ಅಲ್ಲ; ನಾಗರಿಕರಿಗೆ ಪರಿಸರ, ಸ್ವಚ್ಛತೆ, ನೈರ್ಮಲ್ಯದ ಜಾಗೃತಿ ಮೂಡಿಸಲು ಮತ್ತು ಪಾಲಿಕೆ ಸಿಬ್ಬಂದಿಗಳು ಆತ್ಮಸಾಕ್ಷಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಮಾಡುವದಾಗಿದೆ ಎಂದು ನೆರೆದವರಿಗೆ ನೇರವಾಗಿ ತಿಳಿಸಿದರು.

ಸಿದ್ದಾರೂಡ ನಗರದ ಗಣೇಶನಗರ ಮೊದಲ ಹಾಗೂ ಎರಡನೇಯ ಕ್ರಾಸ್ ಗಳಲ್ಲಿ ಹುಳು ತುಂಬಿದ ಗಟಾರು, ಕಸಚಲ್ಲಿದ ಬ್ಲ್ಯಾಕ್ ಸ್ಪಾಟ್, ರಸ್ತೆಯಿಂದ ಮೇಲಿರುವ ಮತ್ತು ಕೆಳಗಿರುವ ಮ್ಯಾನ್ ಹೋಲ್ ಮುಚ್ಚಳಗಳು, ಕಸ ತುಂಬಿದ ಖಾಲಿ ಸೈಟ್ ಗಳನ್ನು ಪರಿಶೀಲಿಸಿ, ತಕ್ಷಣ ಸಂಬಂಧಿಸಿದವರ ಮೇಲೆ ಕ್ರಮಕೈಗೊಳ್ಳಲು ಸೂಚಿಸಿದರು.

*ಸ್ವಚ್ಛತಾ ಅಭಿಯಾನಕ್ಕೆ ನಾಗರಿಕರು ಕೈ ಜೋಡಿಸಿ:* ನಮ್ಮ ನಗರ, ಸ್ವಚ್ಛ ನಗರ ಎಂಬ ಅಭಿಮಾನ, ನಾಗರಿಕ ಪ್ರಜ್ಞೆ ನಗರದ ಪ್ರತಿ ನಾಗರಿಕರಲ್ಲಿ ಇರಬೇಕು. ಅಂದಾಗ ಮಾತ್ರ ನಗರದ ಅಂದ, ಚಂದ, ಸೌಂದರ್ಯ ಹೆಚ್ಚಿಸಲು ಮತ್ತು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಹಾನಗರ ಪಾಲಿಕೆಯಿಂದ ಆರಂಭಿಸಿರುವ ಸ್ವಚ್ಛತಾ ಅಭಿಯಾನಕ್ಕೆ ಎಲ್ಲರೂ ಕೈ ಕೋಡಿಸುವ ಅಗತ್ಯವಿದೆ. ನಗರವಾಸಿಗಳು ಸಕ್ರಿಯವಾಗಿ ಭಾಗವಹಿಸಿದರೆ, ನಗರ ಸ್ವಚ್ಛತೆ ಕಾಪಾಡಬಹುದು.

ಅಧಿಕಾರಿಗಳು ಬರೀ ತಮ್ಮ ಕಾರು, ಕಚೇರಿಯಲ್ಲಿ ಕಾಲ ಕಳೆಯದೇ ಸ್ಪಾಟ್ ವಿಜಿಟ್, ಕ್ಷೇತ್ರ ಭೇಟಿ ನೀಡಬೇಕು. ತಮ್ಮವ್ಯಾಪ್ತಿಯ ಪ್ರದೇಶದ ಬಗ್ಗೆ, ಅಲ್ಲಿನ ಸಮಸ್ಯೆಗಳ ಬಗ್ಗೆ ಪ್ರತಿದಿನ ಮಾಹಿತಿ ಹೊಂದಿರಬೇಕು ಎಂದು ತಿಳಿಸಿದರು.

*ಲೋಕೇಷನ್ ಟ್ರ್ಯಾಕ್ ಮತ್ತು ಕ್ಷೇತ್ರ ಭೇಟಿಯ ನಿಖರತೆ ತಿಳಿಯಲು ಅಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಿ:* ಕ್ಷೇತ್ರದ ಸಮಸ್ಯೆ ತಿಳಿಯುವಲ್ಲಿ ವಿಫಲತೆ ಮತ್ತು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದೆ, ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಬರೀ ಅಂಕಿಅಂಶ, ಮಾಹಿತಿ ನೀಡುವ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ಮತ್ತು ಕಾಲಮಿತಿಯಲ್ಲಿ ನಿರ್ವಹಿಸುತ್ತಿಲ್ಲ ಎಂಬುದು ಇಂದು ಸಾರ್ವಜನಿಕರು ನನಗೆ ನೀಡಿದ ದೂರುಗಳಿಂದ ಖಾತರಿ ಆಗಿದೆ. ಪ್ರತಿ ದಿನ ಬೆಳಿಗ್ಗೆ ಕನಿಷ್ಠ 2 ಗಂಟೆಗಳ ಕಾಲ, ಪಾಲಿಕೆಯ ಆಯುಕ್ತರಾದಿಯಾಗಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕ ಸಮಸ್ಯೆಗಳು, ಅಲ್ಲಿನ ಸ್ವಚ್ಛತೆ, ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು. ಪರಿಹರಿಸಲು ಸಂಬಂದಪಟ್ಟವರಿಗೆ ಮಾಹಿತಿ ನೀಡಿ, ಅದನ್ನು ಪಾಲೋ ಅಪ್ ಮಾಡಬೇಕು. ಇದಕ್ಕೆ ಅಗತ್ಯವಿರುವ ಕ್ರಿಯಾ ಯೋಜನೆ ರೂಪಿಸಿ, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು, ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಹುಬ್ಬಳ್ಳಿ, ಧಾರವಾಡ ಸುಂದರ, ಸ್ವಚ್ಛ ನಗರವಾಗಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

*ಹುಬ್ಬಳ್ಳಿ ನಗರದಲ್ಲಿ ನಗರದ ಅಂದ, ಚಂದ,ನೈರ್ಮಲ್ಯ ಕೆಡಿಸುವ 622 ಬ್ಲ್ಯಾಕ್ ಸ್ಪಾಟ್:* ಹುಬ್ಬಳ್ಳಿ ಮಹಾನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಕಸ ಚೆಲ್ಲುವ 622 ಬ್ಲ್ಯಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಇವುಗಳನ್ನು ನಿರಂತರವಾಗಿ ಸ್ವಚ್ಛಗೊಳಿಸಬೇಕು. ಇಂತಲ್ಲಿ ಕಸ ಚಲ್ಲುವವರನ್ನು ಗುರುತಿಸಿ, ಅವರಿಗೆ ಪಾಲಿಕೆ ಅಧಿಕಾರಿಗಳು ದಂಡ ಹಾಕಬೇಕು ಎಂದು ಸಚಿವ ಸಂತೋಷ ಲಾಡ ಅವರು ತಿಳಿಸಿದರು.

ಪಾಲಿಕೆ ಆಯುಕ್ತರು, ವಲಯ ಸಹಾಯಕ ಆಯುಕ್ತರು, ಇಂಜನೀಯರ, ತ್ಯಜ್ಯ ನಿರ್ವಹಣಾ ಅಧಿಕಾರಿಗಳು ಆರೋಗ್ಯ ನಿರೀಕ್ಷಕರು ನಿರಂತರವಾಗಿ ತಮ್ಮ ವ್ಯಾಪ್ತಿಯ ವಾರ್ಡ, ಓಣಿ ಪ್ರದೇಶವನ್ನು ಸುತ್ತಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ, ಪರಿಹರಿಸಬೇಕು ಎಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.

*ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 82 ಸಾವಿರ ಖಾಲಿ ಸೈಟ:* ನಗರ ಅಂದಗೆಡುವಲ್ಲಿ ನಗರದಲ್ಲಿ ಖಾಲಿ ಸೈಟ್ ಹೊಂದಿರುವ ಮಾಲೀಕರು ತಪ್ಪೂ ಇದೆ. ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಅಂದಾಜು 82 ಸಾವಿರ ಖಾಲಿ ಸೈಟ್ ಗಳಿವೆ. ಅವುಗಳಲ್ಲಿನ ಬಹುತೇಕ ಸೈಟ್ ಗಳಿಗೆ ಕಂಪೌಂಡ್ ಇಲ್ಲ, ತಂತಿ ಬೇಲಿ ಇಲ್ಲ, ಸ್ವಚ್ಛತೆ ಇಲ್ಲ. ಗಿಡಗಂಟಿ ಬೆಳೆದು ನಿಂತಿವೆ. ಬೇರೆಯವರು ತಮ್ಮ ಮನೆಯ ಕಸ ತಂದು ಅದರಲ್ಲಿ ಎಸೆಯುತ್ತಾರೆ. ಇದರಲ್ಲಿ ವಿಷ ಜಂತುಗಳು, ಹಂದಿಗಳು ವಾಸಿಸುತ್ತಿವೆ ಎಂದರು.

ಇದನ್ನು ಪಾಲಿಕೆ ಆಯುಕ್ತರು ಗಂಭೀರವಾಗಿ ಪರಿಗಣಿಸಿ, ಈ ಕುರಿತು ಸಾರ್ವಜನಿಕ ಪ್ರಕಟಣೆ ನೀಡಿ, ಸೈಟ್ ಮಾಲೀಕರು ಒಂದು ವಾರದೊಳಗೆ ತಮ್ಮ ಸೈಟ್ ಸ್ವಚ್ಛಗೊಳಿಸಲು ನಿರ್ದೇಶನ ನೀಡಬೇಕು. ಕ್ರಮವಹಿಸದೇ ಇರುವ ಸೈಟ್ ಮಾಲೀಕರಿಗೆ ನಿಯಮಾನುಸಾರ ಹೆಚ್ಚಿನ ದಂಡ ವಿಧಿಸಬೇಕು. ದಂಡ ಕಟ್ಟಿಯೂ ಸುಧಾರಿಸದ ಮತ್ತು ಪಾಲಿಕೆ ಆದೇಶ ಪಾಲಿಸದ ಮಾಲೀಕರ ಸೈಟ್ ಗಳನ್ನು ಕಾನೂನಾತ್ಮಕ ಕ್ರಮ ಕೈಗೊಂಡು ಅವುಗಳನ್ನು, ಪಾಲಿಕೆಗೆ ಜಪ್ತಿ ಮಾಡಿಕೊಳ್ಳಬೇಕು ಎಂದು ಸಚಿವರು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರಿಗೆ ಸೂಚಿಸಿದರು.

*ನಗರದ ಸ್ವಚ್ಛತೆ, ಹಸಿರು ಪರಿಸರ ಕಾಪಾಡಲು ಸ್ವಯಂ ಸೇವಕರು ಭಾಗಿಯಾಗಲಿ:* ನಗರ ಸ್ವಚ್ಛತೆಗೆ ನಾಗರಿಕರ, ಪರಿಸರವಾದಿಗಳ, ಸರಕಾರತೇರ ಸಂಸ್ಥೆಗಳ ಸದಸ್ಯರ ಸಹಕಾರವೂ ಬೇಕು.

ಸರಕಾರಿ ರಜಾದಿನ ಹಾಗೂ ಭಾನುವಾರಗಳಂದು ಎನ್.ಎಸ್.ಎಸ್ ಹಾಗೂ ಇತರ ಸ್ವಯಂ ಸೇವಾ ಸಂಘಟನೆಗಳ ಸಹಕಾರದಲ್ಲಿ ನಗರ ನೈರ್ಮಲ್ಯಕ್ಕಾಗಿ ಕಾರ್ಯಕ್ರಮಗಳನ್ನು ಸಂಘಟಿಸಿ, ಜಾರಿಗೊಳಿಸಬೇಕು ಎಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಶಾಸಕ ಅಬ್ಬಯ್ಯ ಪ್ರಸಾದ ಅವರು ಮಾತನಾಡಿ, ಪಾಲಿಕೆಯ ಅಧಿಕಾರಿ, ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಸೇರಿ 100 ಜನರ ತಂಡಗಳನ್ನು ಮಾಡಿಕೊಂಡು ಪ್ರತಿ ವಾರ ಒಂದೊಂದು ವಾರ್ಡ್ ಗೆ ಒಂದು ತಂಡ ಕಳಿಸಿ, ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಈಗ ಮಳೆಗಾಲ ಆರಂಭವಾಗಿರುವದರಿಂದ ಹೆಲ್ತ್ ಇನಸ್ಪೆಕ್ಟರ್ ಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ‌ಮಾಡಬೇಕು ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯ ಪ್ರಕಾರ ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲ ಶಾಸಕರೊಂದಿಗೆ ಸಭೆ ಜರುಗಿಸಿ, ನಗರ ಸ್ವಚ್ಛತೆಗಾಗಿ ವಿಶೇಷ ಅಭಿಯಾನ ರೂಪಿಸುವದಾಗಿ ತಿಳಿಸಿದರು.

ಮಳೆಗಾಲ ಸಮಯದಲ್ಲಿ ಎಲ್ಲ ರಾಜಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸಲು ಮತ್ತು ತುರ್ತು ಕಾಮಗಾರಿಗಳಿದ್ದಲ್ಲಿ ಕೈಗೊಳ್ಳಲು ಈಗಾಗಲೇ ಪಾಲಿಕೆ ಆಯುಕ್ತರಿಗೆ, ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಕುರಿತು ಸಭೆ ಜರುಗಿಸಿ, ನಿರ್ದೇಶನ ಪಾಲಿಸಿರುವ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದರು.

ಮಹಾನಗರಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಅವರು ಮಾತನಾಡಿ, ಪಾಲಿಕೆ‌ ಆಡಳಿತ ಜನಸ್ನೇಹಿ ಆಗಲು ವಿವಿಧ ರೀತಿಯಲ್ಲಿ ನಾಗರಿಕ ಸೇವಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗುತ್ತಿಗೆದಾರರಿಗೆ ಕಾಮಗಾರಿ ವೇತನ ಪಾವತಿಸುವ ಮೂಲಕ ತುಂಡು ಕಾಮಗಾರಿ, ದುರಸ್ತಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಪೌರ ಕಾರ್ಮಿಕರ, ಸಿಬ್ಬಂದಿಗಳ ಕೊರತೆಯ ಮಧ್ಯ ದಲ್ಲಿಯೂ ಸಾರ್ವಜನಿಕ ದೂರುಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸಿ, ಪರಿಹಾರಕ್ಕೆ ಕ್ರಮವಹಿಸಲಾಗುತ್ತಿದೆ. ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಇಂದು ನೀಡಿರುವ ನಿರ್ದೇಶನಗಳನ್ನು ಅಳವಡಿಸಿ ಕೊಳ್ಳಲಾಗುತ್ತದೆ ಎಂದರು.

ಸಚಿವರ ಇಂದಿನ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಬಡಾವಣೆಗಳ ಸಾರ್ವಜನಿಕರು, ಮಹಿಳೆಯರು, ನಿವಾಸಿಗಳ ಸಂಘದ ಸದಸ್ಯರು ಭಾಗವಹಿಸಿ, ಬಡಾವಣೆ ಸಮಸ್ಯೆಗಳನ್ನು ಸಚಿವ ಸಂತೋಷ ಲಾಡ್ ಅವರ ಗಮನಕ್ಕೆ ತಂದರು.

ಇಂದಿನ ಸ್ವಚ್ಛತಾ ಅಭಿಯಾನದಲ್ಲಿ ಪಾಲಿಕೆ ಮಹಾಪೌರ ರಾಮಪ್ಪ ಬಡಿಗೇರ, ಐಎಎಸ್ ಪ್ರೊಬೇಷನರಿ ಅಧಿಕಾರಿ ರಿತಿಕಾ ವರ್ಮಾ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ ಸಂತೋಷ ಬಿರಾದಾರ, ಪಾಲಿಕೆ ಸದಸ್ಯರಾದ ನಾಗರಾಜ ಗೌರಿ, ರಾಜಣ್ಣ ಕೊರವಿ, ಸುವರ್ಣಾ ಕಲ್ಕುಂಟ್ಲಾ, ಪಾಲಿಕೆ ಅಧೀಕ್ಷಕ ಅಭಿಯಂತರ ವಿಜಯಕುಮಾರ, ಇಇ ವಿಠ್ಠಲ ತುಬಾಕಿ, ಘನ ತ್ಯಾಜ್ಯ ವಿಲೇವಾರಿ ವಿಭಾಗದ ಇಇ ಸಂತೋಷ ಯರಂಗಳಿ, ವಲಯ ಆಯುಕ್ತ ಮಾಲಿಪಾಟೀಲ, ಪಾಲಿಕೆ ಅಧಿಕಾರಿಗಳಾದ ಗಿರೀಶ ತಳವಾರ, ಆನಂದ ಕಾಂಬಳಿ, ಮಲ್ಲಿಕಾರ್ಜುನ ಸೇರಿದಂತೆ ಪಾಲಿಕೆಯ ನಾಮನಿರ್ದೇಶಿತ ಸದಸ್ಯರು, ಇತರ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande