ಬೆಂಗಳೂರು, 20 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ಆಂತರಿಕ ವ್ಯವಸ್ಥೆಯ ವಿರುದ್ಧವೇ ಆಡಳಿತ ಪಕ್ಷದ ಹಿರಿಯ ಶಾಸಕ ಸಿಡಿದಿದ್ದು, ಭ್ರಷ್ಟಾಚಾರದ ಆರೋಪ ಕೇಳು ಬಂದಿದೆ. ಆಳಂದ ಕ್ಷೇತ್ರದ ಶಾಸಕರೂ ಆಗಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅವರು, ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಹೊರ ಹಾಕಿರುವುದಾಗಿ ಕೇಳಿ ಬರುತ್ತಿರುವ ದೂರವಾಣಿ ಸಂಭಾಷಣೆ ಬಹಿರಂಗವಾಗಿದೆ.
ಪಾಟೀಲ್ ಅವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ, “ಹಣ ನೀಡಿದವರಿಗಷ್ಟೇ ಮನೆ ಮಂಜೂರಾಗುತ್ತಿದೆ. ನನ್ನ ಶಿಫಾರಸು ಪತ್ರಗಳನ್ನು ಪರಿಗಣಿಸದೆ, ಲಂಚ ನೀಡಿದವರ ಪಟ್ಟಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಈ ಸಂಭಾಷಣೆಯಲ್ಲಿ ಪಾಟೀಲ್ ಅವರು ತಮ್ಮ ಕ್ಷೇತ್ರದ ಮುನ್ನಳ್ಳಿ (200 ಮನೆ), ದರ್ಗಾ ಶಿರೂರು (100), ಧಂಗಾಪುರ (200), ಕವಲಗಾ (200), ಮಾಡಿಯಾಳ (200) ಎಂಬುವಂತೆ ಒಟ್ಟು 950 ಮನೆಗಳು ಲಂಚದ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಕದ ಅಫಜಲಪುರ ಕ್ಷೇತ್ರದಲ್ಲಿಯೂ ಈ ರೀತಿ ಹಣ ಪಡೆದು ಮನೆ ಹಂಚಿಕೆ ಮಾಡಲಾಗುತ್ತಿದೆ ಎಂಬುದೂ ಶಾಸಕರ ಆರೋಪ.
“ನಾನು ಕೊಟ್ಟ ಶಿಫಾರಸು ಪತ್ರಗಳಿಗೆ ಬೆಲೆ ಕೊಡದೆ, ಪಂಚಾಯಿತಿಗಳ ಅಧ್ಯಕ್ಷರ ಪಟ್ಟಿಗೆ ಒಪ್ಪಿಗೆ ನೀಡಲಾಗಿದೆ. ಶಾಸಕರ ಶಿಫಾರಸಿಗೆ ಬೆಲೆಯಿಲ್ಲವೇ?” ಎಂದು ಕಿಡಿಕಾರಿದ್ದಾರೆ.
ಸಂಭಾಷಣೆ ವೇಳೆ ಪ್ರತಿಕ್ರಿಯಿಸಿದ ಸರ್ಫರಾಜ್ ಖಾನ್ ಅವರು, “ಯಾವ್ಯಾವ ಸ್ಥಳದಲ್ಲಿ ಹೀಗೆ ಆಗಿದೆ ವಿವರ ನೀಡಿ. ನಾವು ಕೂಡಲೇ ಕ್ರಮ ಕೈಗೊಳ್ಳುತ್ತೇವೆ, ಲಂಚ ಕೊಟ್ಟವರು ಯಾರಾದರೂ ಇದ್ದರೆ ಜೈಲಿಗೆ ಕಳಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಈ ಆಡಿಯೋ ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪ್ರತಿಪಕ್ಷಗಳು ಇದನ್ನು ದೊಡ್ಡ ಅಸ್ತ್ರವಾಗಿ ಬಳಸಿಕೊಂಡಿದ್ದು, ಮುಖ್ಯಮಂತ್ರಿ ಹಾಗೂ ವಸತಿ ಸಚಿವರು ಈ ಕುರಿತು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa