ಬೆಂಗಳೂರು, 02 ಜೂನ್ (ಹಿ.ಸ.) :
ಆ್ಯಂಕರ್ : ಆಲಮಟ್ಟಿ ಅಣೆಕಟ್ಟೆ ಎತ್ತರಿಸುವ ಯೋಜನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೇ 9ರಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಎಫ್ಆರ್ಎಲ್ ಎತ್ತರ ಹೆಚ್ಚಳದಿಂದ ಸಾಂಗ್ಲಿ ಹಾಗೂ ಕೊಲ್ಹಾಪುರ ಭಾಗಗಳಲ್ಲಿ ಪ್ರವಾಹ ಸಂಭವಿಸುವ ಆತಂಕವಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಾರಾಷ್ಟ್ರ ಸರ್ಕಾರ ಈಗ ಹೊಸದಾಗಿ ತಗಾದೆ ತೆಗೆದಿರುವುದು ಆಶ್ಚರ್ಯಕರ ಎಂದು ಹೇಳಿದ್ದಾರೆ. ಕೃಷ್ಣಾ ಎರಡನೇ ನ್ಯಾಯಾಧಿಕರಣದ ಅಂತಿಮ ತೀರ್ಪಿಗೆ ಮಹಾರಾಷ್ಟ್ರ ಸಹಮತ ನೀಡಿದ್ದರೂ ಈಗ ತಕರಾರು ಎತ್ತುವುದು ನ್ಯಾಯಸಮ್ಮತವಲ್ಲ ಎಂದಿದ್ದಾರೆ.
ನಮ್ಮ ಪಾಲಿನ ನೀರನ್ನು ಬಳಸುವುದು ರಾಜ್ಯದ ಹಕ್ಕು. ಮಹಾರಾಷ್ಟ್ರದಲ್ಲಿ ಪ್ರವಾಹವಾಯಿತೆಂದರೆ ಅವರು ಬಗೆಹರಿಸಿಕೊಳ್ಳಬೇಕು, ಎಂದು ಅವರು ಹೇಳಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ವೆಚ್ಚವು ₹1 ಲಕ್ಷ ಕೋಟಿ ತಲುಪಲಿದೆ ಎಂದರು.
ಇದೇ ವೇಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ಪತ್ರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa