ಬೆಂಗಳೂರು, 02 ಜೂನ್ (ಹಿ.ಸ.) :
ಆ್ಯಂಕರ್ : ಬಿಜೆಪಿಯವರು ಹಿಂದೂ, ಮುಸ್ಲಿಂರೆಂದು ಭೂತ ಕನ್ನಡಿಯಿಂದ ನೋಡುವುದನ್ನು ಬಿಡಬೇಕು. ಸಾಮಾಜಿಕ ಬದ್ಧತೆಯಿಂದ ಎಲ್ಲವನ್ನೂ ನೋಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿಂದೂ ಸಂಘಟನೆಗಳನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿಯ ಸುನೀಲ್ ಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೊದಲು ಸುನೀಲ್ ಕುಮಾರ್ ಅವರು ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕೆಂದು ತಿರುಗೇಟು ನೀಡಿದರು.
ನಾವು ಕೂಡ ಹಿಂದೂನೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಲ್ಲೆ ರಾಮ ಇದ್ದಾನೆ. ಮಹಾತ್ಮಾ ಗಾಂಧಿ ಪಕ್ಷದವರು ನಾವು. ರಾಮನ ಮೇಲೆ ನಮಗೂ ಭಕ್ತಿ ಇದೆ. ಬಿಜೆಪಿಯವರು ಹಿಂದೂ, ಮುಸ್ಲಿಂ ವಿಷಯದಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ಯಾರೇ ಕಾನೂನು ಕೈಗೆತ್ತಿಕೊಂಡರೂ, ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಬದ್ದರಾಗಿದ್ದೇವೆ ಎಂದು ಸಚಿವರು ಹೇಳಿದರು.
ನಾವು ಯಾರನ್ನೂ ಟಾರ್ಗೆಟ್ ಮಾಡುವ ಅನಿವಾರ್ಯತೆ ಇಲ್ಲ. ಬಿಜೆಪಿಗೆ ಮಾತ್ರ ಅಂತಹ ಅನಿವಾರ್ಯತೆ ಇದೆ. ನಮ್ಮ ಮೊದಲ ಆದ್ಯತೆ ಕಾನೂನು ಸುವ್ಯವಸ್ಥೆ ಇರಬೇಕು ಎಂಬುದು. ಉಡುಪಿಯಲ್ಲಿ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿದೆ. ಅವಿಭಾಜ್ಯ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿ ಮಾಡುತ್ತೇವೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa