ಧಾರವಾಡ, 19 ಜೂನ್ (ಹಿ.ಸ.):
ಆ್ಯಂಕರ್:ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸುಮಾರು 2,81,595 ಹೆಕ್ಟೇರ್ ಪ್ರದೇಶ ಬಿತ್ತನೆ ಕ್ಷೇತ್ರದ ಗುರಿ ಹೊಂದಿದ್ದು, ಈಗಾಗಲೇ ಶೇ. 67.72 ರಷ್ಟು ಅಂದರೆ 1,90,700 ಹೆಕ್ಟೇರ್ ನಷ್ಟು ಬಿತ್ತನೆ ಆಗಿರುತ್ತದೆ. ಕಳೆದ 3, 4 ದಿನದಿಂದ ಮಳೆಯು ಸ್ವಲ್ಪ ಬಿಡುವನ್ನು ನೀಡಿರುವುದರಿಂದ ಬಿತ್ತನೆ ಕಾರ್ಯ ಚೂರುಕಾಗಿ ಮುಂದುವರೆದಿದ್ದು ಶೇ. 100 ರಷ್ಟು ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ಸೋಯಾಅವರೆ, ಮೆಕ್ಕೆಜೋಳ, ಹೆಸರು, ಉದ್ದು, ಮತ್ತು ಶೇಂಗಾ ಸೇರಿದಂತೆ ವಿವಿಧ ಬಿತ್ತನೆ ಬೀಜಗಳನ್ನು ಜಿಲ್ಲೆಯ ಒಟ್ಟು 31 ಬೀಜ ವಿತರಣಾ ಕೇಂದ್ರಗಳ ಮೂಲಕ ಇಲಾಖೆಯು ಸಹಾಯಧನದಡಿ ರೈತರಿಗೆ ವಿತರಿಸಲಾಗುತ್ತದೆ.
ಬಿತ್ತನೆ ಬೀಜ ವಿತರಣೆ: ಬೀಜ ವಿತರಿಸುತ್ತಿದ್ದು, 8,572 ಕ್ವಿಂ. ರಷ್ಟು ಸೋಯಾಅವರೆ, 2,138 ಕ್ವಿಂ, ನಷ್ಟು ಮೆಕ್ಕೆಜೋಳ, 678 ಕ್ವಿಂ. ನಷ್ಟು ಹೆಸರು, ಹಾಗೂ ವಿವಿಧ ಬೀಜಗಳನ್ನು ಒಳಗೊಂಡಂತೆ ಒಟ್ಟು 11,982 ಕ್ವಿಂ. ನಷ್ಟು ಬಿತ್ತನೆ ಬೀಜಗಳು ವಿತರಣೆಯಾಗಿರುತ್ತವೆ. ಅಲ್ಲದೇ ಮೆಕ್ಕೆಜೋಳ 652, ಹೆಸರು 382, ಸೋಯಾಅವರೆ 291 ಕ್ವಿಂ ಹಾಗೂ ವಿವಿಧ ಬಿತ್ತನೆ ಬೀಜಗಳನ್ನು ಒಳಗೊಂಡಂತೆ ಒಟ್ಟು 1,918 ಕ್ವಿಂ ನಷ್ಟು ಬೀಜಗಳನ್ನು ದಾಸ್ತಾನಿಕರಿಸಲಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜದ ಬೇಡಿಕೆಯನ್ವಯ ಸಾಕಷ್ಟು ದಾಸ್ತಾನು ಇದ್ದು ಯಾವುದೇ ಕೊರತೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ರಸಗೊಬ್ಬರ ವಿತರಣೆರ: ಮುಂಗಾರು ಹಂಗಾಮಿಗೆ ಒಟ್ಟು 49,471 ಮೆ.ಟನ್ ನಷ್ಟು ವಿವಿಧ ರಸಗೊಬ್ಬರಗಳ ಬೇಡಿಕೆಯನ್ನು ಹೊಂದಿದೆ. ಜೂನ್ ಅಂತ್ಯಕ್ಕೆ ಯೂರಿಯಾ-11510, ಡಿ.ಎ.ಪಿ-7636, ಎಂ.ಓ.ಪಿ-404, ಕಾಂಪ್ಲೇಕ್ಸ್-3372 ಮೆ.ಟನ್ ಗಳಷ್ಟು ಬೇಡಿಕೆ ಇದ್ದು ಈಗಾಗಲೇ ಯೂರಿಯಾ-14835, ಡಿ.ಎ.ಪಿ-8137, ಎಂ.ಓ.ಪಿ-2317, ಹಾಗೂ ಕಾಂಪ್ಲೇಕ್ಸ್-19421 ಮೆ.ಟನ್ ಗಳಷ್ಟು ಆರಂಭಿಕ ಶಿಲ್ಕು ಸೇರಿ ಪೂರೈಕೆಯಾಗಿರುತ್ತದೆ.
ಜಿಲ್ಲೆಯಲ್ಲಿ ಒಟ್ಟು 2,878 ಮೆ.ಟನ್, ಯೂರಿಯಾ, 2,290 ಮೆ.ಟನ್, ಡಿ.ಎ.ಪಿ, 9,082 ಮೆ.ಟನ್, ಕಾಂಪ್ಲೇಕ್ಸ್ ರಸಗೊಬ್ಬರ ಸೇರಿ ಒಟ್ಟು 15,608 ಮೆ.ಟನ್ ನಷ್ಟು ರಸಗೊಬ್ಬರ ದಾಸ್ತಾನು ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪಾಲು ಹೆಸರು, ಮೆಕ್ಕೆಜೋಳ, ಸೋಯಾಅವರೆ, ಶೇಂಗಾ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿದ್ದು, ಬೆಳೆಯ ಬೇಡಿಕೆಯನ್ವಯ ವಿವಿಧ ರಸಗೊಬ್ಬರಗಳನ್ನು ಹಂತ ಹಂತವಾಗಿ ಪೂರೈಸಲಾಗುತ್ತಿದೆ. ಹಾಗಾಗಿ ಕಳೆದ ವಾರದಲ್ಲಿ ಸಂಭವಿಸಿದ ಅತೀವೃಷ್ಟಿ, ಮಣ್ಣಿನ ಫಲವತ್ತತೆ ಹಾಗೂ ಬೆಳೆಗಳ ಬೇಡಿಕೆಯನ್ನು ಗಮನದಟ್ಟುಕೊಂಡು ಇಲಾಖೆಯು ಜಿಲ್ಲೆಯಲ್ಲಿ ವಿವಿಧ ರಸಗೊಬ್ಬರಗಳನ್ನು ಪೂರೈಸುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಯಾವುದೇ ರಸಗೊಬ್ಬರ, ಬೀಜಗಳ ಬಿತ್ತನೆ ಕೊರತೆ ಇರುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa