ಮಳೆ ಅಬ್ಬರ : ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಜನಜೀವನ ಅಸ್ತವ್ಯಸ್ತ
ಬೆಂಗಳೂರು, 16 ಜೂನ್ (ಹಿ.ಸ.) : ಆ್ಯಂಕರ್ : ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ ಕಾರಣದಿಂದ ನೆರೆ, ಗುಡ್ಡ ಕುಸಿತ, ಮರಗಳು ಧರೆಗುರುಳಿರುವ ಘಟನೆಗಳು
Rain problem


ಬೆಂಗಳೂರು, 16 ಜೂನ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮಳೆ ಕಾರಣದಿಂದ ನೆರೆ, ಗುಡ್ಡ ಕುಸಿತ, ಮರಗಳು ಧರೆಗುರುಳಿರುವ ಘಟನೆಗಳು ಸಂಭವಿಸುತ್ತಿದ್ದು, ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ಕೆಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಮಂಗಳೂರು ನಗರದಲ್ಲಿ ಕೃತಕ ನೆರೆ, ಗುಡ್ಡ ಕುಸಿತದ ಆತಂಕ

ಮಂಗಳೂರಿನಲ್ಲಿ ಮಾಲೆಮಾರ್, ಕೊಟ್ಟಾರಚೌಕಿ, ಜೆಪ್ಪಿನಮೊಗರು, ಪಾಂಡೇಶ್ವರ, ಸುಭಾಷ್ ನಗರ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೃತಕ ನೆರೆ ಸ್ಥಿತಿ ಉಂಟಾಗಿದೆ. ಮಹಾಕಾಳಿಪಡ್ಪು ಮತ್ತು ಬಜಾಲ್ ರೈಲ್ವೆ ಅಂಡರ್ ಪಾಸ್‌ಗಳಲ್ಲಿ ನೀರು ನಿಂತಿದೆ. ಮಳೆಯ ಆರ್ಭಟಕ್ಕೆ ವಿದ್ಯುತ್ ಕಂಬಗಳು ಹಾಗೂ ಮರಗಳು ಅಪಾಯಕಾರಿಯಾಗಿ ಬಾಗಿದ್ದು, ಪಂಪ್‌ವೆಲ್‌ನ ಮಜಿಕೋಡಿ, ಜೆಪ್ಪಿನಮೊಗರು, ಮಾಲೆಮಾರ್ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತವಾಗಿದ್ದು, ಕದ್ರಿ ಶಿವಭಾಗ್ ಮತ್ತು ಕಂಕನಾಡಿಯಲ್ಲೂ ಬೃಹತ್ ತಡೆಗೋಡೆಗಳು ಉರುಳಿ ಕೆಲ ಮನೆಗಳಿಗೆ ಹಾನಿಯಾಗಿದೆ.

200 ಮಿ.ಮೀ. ದಾಟಿದ ಮಳೆ: ರಾಜ್ಯ ವಿಪತ್ತು ನಿಗಾ ಕೇಂದ್ರದ ವರದಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ ವರದಿಯಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 54 ಮಿ.ಮೀನಿಂದ 215.5 ಮಿ.ಮೀವರೆಗೆ ಮಳೆಯಾಗಿದೆ. ಮಂಗಳೂರಿನಲ್ಲಿ 215.5 ಮಿ.ಮೀ, ಬಜಪೆಯಲ್ಲಿ 206 ಮಿ.ಮೀ, ಮಂಚಿಯಲ್ಲಿ 187 ಮಿ.ಮೀ, ಪುದುವಿನಲ್ಲಿ 184.5 ಮಿ.ಮೀ ಹಾಗೂ ಬಡಗಬೆಳ್ಳೂರಿನಲ್ಲಿ 177.5 ಮಿ.ಮೀ ಮಳೆಯಾಗಿದೆ. ಮುಂಬರುವ 24 ಗಂಟೆಗಳಲ್ಲಿ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ನೀಡಲಾಗಿದೆ.

ಉತ್ತರ ಕನ್ನಡದಲ್ಲಿ ಗುಡ್ಡಕುಸಿತ, ರಸ್ತೆ ಬಂದ್

ಉತ್ತರ ಕನ್ನಡ ಜಿಲ್ಲೆಯ ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ ಮರುಕಳಿಸುತ್ತಿದ್ದು, ಸುರಕ್ಷತಾ ದೃಷ್ಟಿಯಿಂದ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಹೊನ್ನಾವರದ ಬಾಳೆಗದ್ದೆ ಬಳಿ ಬೃಹತ್ ಮರ ಬಿದ್ದ ಕಾರಣ ಬೆಂಗಳೂರು-ಹೊನ್ನಾವರ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದ್ದು, ನೂರಾರು ವಾಹನಗಳು ಸಾಲಾಗಿ ನಿಂತಿವೆ.

ಜೋಯಿಡಾದ ಸಾಂಗ್ವೆ ಗ್ರಾಮದಲ್ಲಿ ಭಾರಿ ಗಾಳಿಗೆ ಮೂರು ಮರಗಳು ಮನೆಯ ಮೇಲೆ ಬಿದ್ದು ಅಪಾರ ಹಾನಿಯಾಗಿದೆ. ಬಡ ಕುಟುಂಬವಾಗಿರುವ ಮನೆ ಮಾಲಕರಿಗೆ ತಾತ್ಕಾಲಿಕ ಪರಿಹಾರದ ಅವಶ್ಯಕತೆ ಇದೆ. ಭಟ್ಕಳದ ಆಸರಕೇರಿ, ಮುಂಡಳ್ಳಿ, ಚೌಥನಿ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಶಿವಮೊಗ್ಗ: ಮನೆ ಗೋಡೆ ಕುಸಿತಕ್ಕೆ 100 ವರ್ಷದ ವೃದ್ಧೆ ಬಲಿ

ಶಿವಮೊಗ್ಗ ಜಿಲ್ಲೆಯ ಅಡಗಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ಮನೆ ಗೋಡೆ ಕುಸಿತದಿಂದ 100 ವರ್ಷದ ಸಿದ್ದಮ್ಮ ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಮಣ್ಣಿನ ಮನೆ ಗೋಡೆಯು ಮಳೆಯಿಂದ ನೆನೆದು ಕುಸಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ವರು ಸದಸ್ಯರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಸಾಗರ ಹಾಗೂ ಹೊಸನಗರ ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಎಲ್ಲಾ ಅಂಗನವಾಡಿ, ಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಎಚ್ಚರಿಕೆ:

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ನಿರೀಕ್ಷೆಯಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸುವೆ ಸೂಚಿಸಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ವರಿಸಿದ್ದು, ಸ್ಥಳೀಯ ಅಧಿಕಾರಿಗಳ ಸೂಚನೆ ಪಾಲಿಸಲು ವಿನಂತಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande