ಗಂಗಾವತಿ ಮಹಿಳೆ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ
ಗಂಗಾವತಿ, 16 ಜೂನ್ (ಹಿ.ಸ.) : ಆ್ಯಂಕರ್ : ಗಂಗಾವತಿ ತಾಲ್ಲೂಕಿನ ಆನೆಗುಂದಿಯ ಮಹಿಳೆಯೊಬ್ಬರನ್ನು ಕೊಲೆಗೈದಿದ್ದ ಅಪರಾಧಿಗೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಜೂನ್ 12 ರಂದು ತೀರ್ಪು ಪ್ರಕಟಿಸಿದೆ. ಆನೆಗುಂದಿ ನಿವಾಸಿಯಾದ ಡಿ.ಪಿ.ಕುಮಾರಸ್ವಾಮಿ ರಾಜು @ ರಾಜ
ಗಂಗಾವತಿ ಮಹಿಳೆ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ


ಗಂಗಾವತಿ, 16 ಜೂನ್ (ಹಿ.ಸ.) :

ಆ್ಯಂಕರ್ : ಗಂಗಾವತಿ ತಾಲ್ಲೂಕಿನ ಆನೆಗುಂದಿಯ ಮಹಿಳೆಯೊಬ್ಬರನ್ನು ಕೊಲೆಗೈದಿದ್ದ ಅಪರಾಧಿಗೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಜೂನ್ 12 ರಂದು ತೀರ್ಪು ಪ್ರಕಟಿಸಿದೆ.

ಆನೆಗುಂದಿ ನಿವಾಸಿಯಾದ ಡಿ.ಪಿ.ಕುಮಾರಸ್ವಾಮಿ ರಾಜು @ ರಾಜು ತಂದೆ ಕುಪ್ಪರಾಜು ಎಂಬ ವ್ಯಕ್ತಿಯು 2018ರ ಜೂನ್ 27 ರಂದು ಅದೇ ಗ್ರಾಮದ ನಿವಾಸಿ ಲಕ್ಷ್ಮಿಯಮ್ಮ ಕಿಶೋರ ಎಂಬುವವರ ಮನೆಗೆ ನುಗ್ಗಿ ಚಿನ್ನದ ತಾಳಿಸರ ಕೊಡುವಂತೆ ಒತ್ತಾಯಿಸಿದ್ದನು. ಮಹಿಳೆ ಸರ ಕೊಡದಿದ್ದಾಗ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಆಕೆಯ ಮೇಲೆ ಭೀಕರ ಹಲ್ಲೆ ನಡೆಸಿದ್ದನು. ತೀವ್ರತರ ಗಾಯಗಳಿಂದ ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದಳು.

ಈ ಕುರಿತು ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯಲ್ಲಿ ಆರೋಪಿಯ ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಗಂಗಾವತಿ ಗ್ರಾಮೀಣ ಸಿಪಿಐ ದೀಪಕ್ ಆರ್.ಬೂಸರಡ್ಡಿ ಅವರು ಆರೋಪಿಯ ವಿರುದ್ಧ ಗಂಗಾವತಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಆರೋಪಿಯು ತಪ್ಪಿತಸ್ಥನೆಂದು ತೀರ್ಪು ನೀಡಿ, ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ 302 ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ರೂ.1 ಲಕ್ಷಗಳ ದಂಡವನ್ನು ತೀರ್ಪಿನ ದಿನಾಂಕದಿಂದ 3 ತಿಂಗಳೊಳಗಾಗಿ ಮೃತಳ ತಾಯಿಗೆ ನೀಡುವಂತೆ ಆದೇಶಿಸಿದೆ. ದಂಡ ಪಾವತಿಸದೇ ಇದ್ದಲ್ಲಿ 1 ವರ್ಷ ಸಾದಾ ಕಾರಾಗೃಹ ವಾಸದ ಶಿಕ್ಷೆ ಅನುಭವಿಸುವಂತೆ ಹಾಗೂ ಕಲಂ 392 ರ ಅಪರಾಧಕ್ಕೆ 7 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ಹಾಗೂ ರೂ.10,000/- ಗಳ ದಂಡವನ್ನು ತೀರ್ಪಿನ ದಿನಾಂಕದಿಂದ 3 ತಿಂಗಳೊಳಗಾಗಿ ಸರ್ಕಾರಕ್ಕೆ ಭರಿಸುವಂತೆ, ದಂಡ ಕಟ್ಟದೇ ಇದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾಗಲಕ್ಷ್ಮಿ ಎಸ್. ಅವರು ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ವೆಂಕಟೇಶ ಮತ್ತು ಮಂಜುನಾಥ ರವರು ವಿಚಾರಣೆ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕರಿಸಿದ್ದಾರೆ ಎಂದು ಗಂಗಾವತಿಯ ಸರ್ಕಾರಿ ಅಭಿಯೋಜಕರ ಕಾರ್ಯಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande