ಬೆಂಗಳೂರು, 11 ಜೂನ್ (ಹಿ.ಸ.) :
ಆ್ಯಂಕರ್ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪೊಪ್ಪಿಕೊಂಡಿದ್ದರು. ಜಾರಿ ನಿರ್ದೇಶನಾಲಯ ಬಹಳ ತಡವಾಗಿ ದಾಳಿ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಈ ಹಗರಣದ ಹಣ ಲೋಕ ಸಭಾ ಚುನಾವಣೆ ಬಳಕೆಯಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಬಡವರ ಹಣ ತಿಂದ ಕಾಂಗ್ರೆಸ್ ನಾಯಕರಿಗೆ ಶಿಕ್ಷೆಯಾಗಬೇಕು. ಇಡಿಯ ಈ ಕೆಲಸವನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ನವರು ಇದು ದ್ವೇಷದ ರಾಜಕಾರಣ ಎನ್ನುತ್ತಾರೆ. ಆದರೆ ಹಗರಣ ನಡೆದಿದೆ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿರುವಾಗ ದ್ವೇಷ ಬರಲು ಹೇಗೆ ಸಾಧ್ಯ? ಬಿಜೆಪಿ ನಡೆಸಿದ ಹೋರಾಟ ಈಗ ತಾರ್ಕಿಕ ಅಂತ್ಯಕ್ಕೆ ತಲುಪಿದೆ. 187 ಕೋಟಿ ರೂ. ಹಗರಣ ನಡೆದಿದೆ ಎಂಬುದು ಗೊತ್ತಾಗಿದೆ ಅಂದಮೇಲೆ ಇದಕ್ಕೆ ಕಾರಣರಾದವರ ಹೆಸರನ್ನು ಬಹಿರಂಗಪಡಿಸಲಿ. ಸುಮ್ಮನೆ ಬಿಜೆಪಿಯನ್ನು ತೆಗಳುವುದು ಸರಿಯಲ್ಲ. ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ಮಾಜಿ ಸಚಿವ ನಾಗೇಂದ್ರ ಹಣ ವರ್ಗಾವಣೆ ಮಾಡಿದ್ದರು. ಅವರ ಭಯದಿಂದಾಗಿ ಅವರನ್ನು ಮತ್ತೆ ಸಚಿವರಾಗಿ ಮಾಡಲು ಸಿದ್ಧತೆ ನಡೆದಿದೆ ಎಂದು ಅಶೋಕ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa