ಬಳ್ಳಾರಿ/ಸಂಡೂರು/ಕಂಪ್ಲಿ/ಕೂಡ್ಲಿಗಿ, 11 ಜೂನ್ (ಹಿ.ಸ.) :
ಆ್ಯಂಕರ್ : ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಳ್ಳಾರಿಯ ಸಂಸದರು, ಶಾಸಕರುಗಳ ಮನೆ-ಕಚೇರಿಯ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ. ಶಾಸಕರಾದ ನಾರಾ ಭರತರಡೆಡ್ಡಿ, ಇ. ಅನ್ನಪೂರ್ಣ, ಜೆ.ಎನ್. ಗಣೇಶ್, ಡಾ. ಎನ್.ಟಿ. ಶ್ರೀನಿವಾಶ್ ಇನ್ನಿತರರ ಮೊಬೈಲ್ ವಶಕ್ಕೆ ಪಡೆದಿರುವ ಇಡಿ, ವಾಟ್ಸಪ್ ಕರೆಗಳು ಮತ್ತು ಡಿಲೀಟ್ ಆಗಿರುವ ಮಾಹಿತಿ ರಿಟ್ರೀವ್ ಮಾಡುತ್ತಿದೆ.
ಬುಧವಾರ ಬೆಳಗ್ಗೆ 5 ಗಂಟೆಗೆ ದಾಳಿಗೆ ಸಜ್ಜಾಗಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ, ಬಳ್ಳಾರಿ ಸಂಸದ ಇ. ತುಕಾರಾಂ ಅವರ ಸಂಡೂರಿನ ಅಶೋಕ ಕಾಲೊನಿ (ಡಾಲರ್ಸ್ ಕಾಲೊನಿ), ಬಳ್ಳಾರಿಯ ಶಾಸಕ ನಾರಾ ಭರತರೆಡ್ಡಿ ಅವರ ನೆಹರೂ ಕೊಲೊನಿಯ ಮನೆ, ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರ ಕಪ್ಪಗಲ್ಲು ರಸ್ತೆಯಲ್ಲಿರುವ ಮನೆ, ಬೆಂಗಳೂರಿನಲ್ಲಿ ಇರುವ ಶಾಸಕರ ಭವನದ ಕೊಠಡಿ, ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರ ಕಂಪ್ಲಿಯಲ್ಲಿರುವ ಮನೆ, ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಕೂಡ್ಲಿಗಿಯ ಮನೆ ಹಾಗೂ ಬಿ. ನಾಗೇಂದ್ರ ಅವರ ಆಪ್ತ, ರೂಪನಗುಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಉಸ್ತುವಾರಿ ಆಗಿದ್ದ ಲಿಂಗದೇವನಹಳ್ಳಿಯ ಎಲ್. ಗೋವರ್ಧನರೆಡ್ಡಿ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಂಡೂರು ಪಟ್ಟಣದ ಅಶೋಕ ಕಾಲೊನಿ (ಡಾಲರ್ಸ್ ಕಾಲೊನಿ)ಯ ಮನೆಯಲ್ಲಿದ್ದ ಸಂಸದ ಇ. ತುಕಾರಾಂ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರದಲ್ಲಿ 21 ಕೋಟಿ ರುಪಾಯಿ ಪಡೆದಿರುವ ಸಾಕ್ಷ್ಯಗಳನ್ನು ಸಂಗ್ರಹ ಮಾಡಿರುವ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಂಸದರ ಮನೆಯನ್ನು ಶೋಧ ಮಾಡಿ, ಬೆಳಗ್ಗೆ 11 ಗಂಟೆ ಸುಮಾರಿಗೆ ಅವರನ್ನು ಕರೆದು, ವಿಚಾರಣೆ ನಡೆಸಿದ್ದಾರೆ.
ಬಳ್ಳಾರಿ ಶಾಸಕ ನಾರಾ ಭರತರೆಡ್ಡಿ ಅವರ ನೆಹರು ಕಾಲೊನಿಯ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡವು ಅವರ ಮನೆ ಮತ್ತು ಕಚೇರಿಯ ಮೇಲೆ ಶೋಧ ನಡೆಸಿದ ನಂತರ, ಅವರನ್ನು ಬೆಳಗ್ಗೆ 11.30ರ ಪ್ರತ್ಯೇಕವಾಗಿ ಕರೆದು, ವಿಚಾರಣೆ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಶೋಧ ನಡೆಸಿದಾಗ ಚುನಾವಣೆಗಳಿಗೆ ಸಂಬಂಧಿಸಿದ ಕೆಲ ದಾಖಲೆ ಪತ್ರಗಳು ಸಿಕ್ಕಿವೆ ಎಂದು ಹೇಳಲಾಗಿದೆ.
ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರ ಬಳ್ಳಾರಿಯ ಕಪ್ಪಗಲ್ಲು ರಸ್ತೆಯ ಮನೆ, ಬೆಂಗಳೂರಿನ ಶಾಸಕರ ಭವನದ ಕೊಠಡಿ ಮತ್ತು ಇನ್ನಿತರೆ ಸ್ಥಳಗಳಲ್ಲಿ ದಾಳಿ ನಡೆದಿದೆ. ಬಿ. ನಾಗೇಂದ್ರ ಅವರ ಆಪ್ತ, ರೂಪನಗುಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಉಸ್ತುವಾರಿ ಆಗಿದ್ದ ಲಿಂಗದೇವನಹಳ್ಳಿಯ ಎಲ್. ಗೋವರ್ಧನರೆಡ್ಡಿ ಅವರ ಲಿಂಗದೇವನಹಳ್ಳಿ ಮತ್ತು ಬಳ್ಳಾರಿ ನಗರದಲ್ಲಿ ಕೆಲವೆಡೆ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಆದರೆ, ಪೊಲೀಸರು ಖಚಿತಪಡಿಸಿಲ್ಲ.
ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ತುಮಕೂರಿಗೆ ಹೋಗಿದ್ದು, ಶಾಸಕರ ತಾಯಿ ಮಾತ್ರ ಕೂಡ್ಲಿಗಿಯ ಮನೆಯಲ್ಲಿದ್ದು, ಅಧಿಕಾರಿಗಳು ದಾಖಲೆಗಳು ಪರಿಶೀಲನೆ ನಡೆಸಿದ್ದಾರೆ. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಮಂಗಳವಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ಸಂಚರಿಸಿ, ರಾತ್ರಿ ವೇಳೆಗೆ ತುಮಕೂರಿಗೆ ಹೋಗಿದ್ದಾರೆ. ಶಾಸಕರ ತಾಯಿಯು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದು, ಶಾಸಕರು ಮಧ್ಯಾಹ್ನ 12 ಗಂಟೆಗೆ ಕೂಡ್ಲಿಗಿ ಮನೆಗೆ ಆಗಮಿಸಿದ್ದು, ಇಡಿ ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ. ಇವರ ಬಳಿ ನೇತ್ರ ಚಿಕಿತ್ಸೆಗಾಗಿ ಆಗಮಿಸಿದ್ದ ಸಾರ್ವಜನಿಕರಿಗೆ ಅಧಿಕಾರಿಗಳು ಕೂಡಿಸಿ, `ನಿಮಗೆ ಚಿಕಿತ್ಸೆ ಕೊಡಿಸಿ, ಕಳುಹಿಸುತ್ತೇವೆ. ನೀವಿಲ್ಲೇ ಇರ್ರಿ' ಎಂದಿದ್ದಾರೆ ಎಂದು ಹೇಳಲಾಗಿದೆ.
ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರ ಕಂಪ್ಲಿಯ ಮನೆಯ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಅವರ ಮನೆ - ಕಚೇರಿಯಲ್ಲಿ ಶೋಧ ನಡೆಸಿದ್ದು, ಶಾಸಕರು ತನಿಖಾ ತಂಡದ ಜೊತೆಯಲ್ಲಿದ್ದಾರೆ.
ಶಾಸಕರಾದ ನಾರಾ ಭರತರೆಡ್ಡಿ, ಇ. ಅನ್ನಪೂರ್ಣ, ಜೆ.ಎನ್. ಗಣೇಶ್, ಡಾ. ಎನ್.ಟಿ. ಶ್ರೀನಿವಾಶ್ ಇನ್ನಿತರರ ಮೊಬೈಲ್ ವಶಕ್ಕೆ ಪಡೆದಿರುವ ಇಡಿ, ವಾಟ್ಸಪ್ ಕರೆಗಳು ಮತ್ತು ಡಿಲೀಟ್ ಆಗಿರುವ ಮಾಹಿತಿ ರಿಟ್ರೀವ್ ಮಾಡುತ್ತಿದೆ. ಇಡಿ ವಿಚಾರಣೆಯನ್ನು ಮುಂದುವರೆಸಿದೆ.
ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರು, ಇ. ತುಕಾರಾಂ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿಯ ಭ್ರಷ್ಟಾಚಾರದ ಹಣದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ನಿಗಮವು ಬಡವರು, ನಿರುದ್ಯೋಗಿಗಳು, ವಿದ್ಯಾರ್ಥಿಗಳಿಗೆ ನೆರವಾಗಬೇಕಿತ್ತು, ಅಲ್ಲಿ ಭ್ರಷ್ಟಾಚಾರ ನಡೆದು, ಚುನಾವಣೆಗೆ ಹಣ ಬಳಕೆಯಾಯಿತು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಎನ್ನುವವರು 2024ರ ಮೇ 26 ರಂದು ಐದು ಪುಟಗಳ ಡೆತ್ನೋಟ್ ಬರೆದಿಟ್ಟು, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾರಣ ಹಗರಣ ಬಯಲಿಗೆ ಬಂದಿರುವುದನ್ನು ನಾವಿಲ್ಲಿ ಸ್ಮರಿಸಬಹುದು.
ಆಕ್ರೋಶ : ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಹೆಗಡೆ, ವಿಷ್ಣುಬೋಯಪಾಟಿ ಸೇರಿ ಅನೇಕರು, ಬಿಜೆಪಿ ಇಡಿ, ಸಿಬಿಐ ಮತ್ತು ಇನ್ನಿತರೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್ಸಿಗರ ವರ್ಚಸ್ಸನ್ನು - ಪ್ರಭಾವವನ್ನು ಮತ್ತು ಸಾಮಥ್ರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದೆ. ಆದರೆ, ಕಾಂಗ್ರೆಸ್ ದಿನೇ ದಿನೇ ವೃದ್ಧಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್