ಕನ್ನಡಿಗರ ಹಣ ಪೋಲು ಮಾಡುವಲ್ಲಿ ಕಾಂಗ್ರೆಸ್ಸಿಗರು ಸಿದ್ದ ಹಸ್ತರು : ಬಿಜೆಪಿ
ಬೆಂಗಳೂರು, 11 ಜೂನ್ (ಹಿ.ಸ.) : ಆ್ಯಂಕರ್ : ಕನ್ನಡಿಗರ ಶ್ರಮದ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುವುದರಲ್ಲಿ ಕಾಂಗ್ರೆಸ್ಸಿಗರು ಸದಾ ಸಿದ್ದ”ಹಸ್ತ”ರು!! ಜನರ ಬೇಕು ಬೇಡಗಳನ್ನು ಕಡೆಗಣಿಸಿ, ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಲು ಮುಂದಾಗುತ್ತದೆ ಎಂಬುದಕ್ಕೆ ಸಿದ್ದರಾಮಯ್ಯ ಅವರು 2015 ರ
ಕನ್ನಡಿಗರ ಹಣ ಪೋಲು ಮಾಡುವಲ್ಲಿ ಕಾಂಗ್ರೆಸ್ಸಿಗರು ಸಿದ್ದ ಹಸ್ತರು : ಬಿಜೆಪಿ


ಬೆಂಗಳೂರು, 11 ಜೂನ್ (ಹಿ.ಸ.) :

ಆ್ಯಂಕರ್ : ಕನ್ನಡಿಗರ ಶ್ರಮದ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುವುದರಲ್ಲಿ ಕಾಂಗ್ರೆಸ್ಸಿಗರು ಸದಾ ಸಿದ್ದ”ಹಸ್ತ”ರು!! ಜನರ ಬೇಕು ಬೇಡಗಳನ್ನು ಕಡೆಗಣಿಸಿ, ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಲು ಮುಂದಾಗುತ್ತದೆ ಎಂಬುದಕ್ಕೆ ಸಿದ್ದರಾಮಯ್ಯ ಅವರು 2015 ರಲ್ಲಿ ಮಾಡಿಸಿದ್ದ ಅವೈಜ್ಞಾನಿಕ ಜಾತಿಗಣತಿ ವರದಿಯೇ ಸಾಕ್ಷಿ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.

ಯಾವುದೇ ಪೂರ್ವಾಪರ ಸಿದ್ದತೆ ನಡೆಸದೆ, ಸಾಧಕ-ಭಾಧಕಗಳ ಬಗ್ಗೆ ಚರ್ಚಿಸದೆ, ಏಕಾಏಕಿ ಜಾತಿಗಣತಿ ನಡೆಸುತ್ತೇವೆ ಎಂದು ಘೋಷಿಸಿದ್ದು ಸಿಎಂ ಸಿದ್ದರಾಮಯ್ಯ ಅವರ ದುರ್ಬಲ ಆಡಳಿತದ ಸುಸ್ಪಷ್ಟ ನಿದರ್ಶನ.

ಜಾತಿಗಣತಿಯನ್ನು ಪ್ರತಿ ಮನೆ-ಮನೆಗೆ ಹೋಗಿ ಅಲ್ಲಿ ಪ್ರತಿಯೊಬ್ಬರಿಂದ ಅವರ ಜಾತಿ ಯಾವುದು ಎಂದು ಕೇಳಿ, ಬಳಿಕ ಅವರ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ವರ್ತಿಸಿ, ಜಾತಿಗಣತಿ ಎಂಬ ಸುಳ್ಳಿನ ವರದಿಯನ್ನು ಎಸಿ ರೂಮಿನಲ್ಲಿ ಕೂತು ತಯಾರಿಸಿತ್ತು.

ಜಾತಿಗಣತಿಯನ್ನು ನಡೆಸಲು ನಿಮ್ಮ ಮನೆಗೆ ಸರ್ಕಾರದಿಂದ ಯಾರಾದರೂ ಪ್ರತಿನಿಧಿಗಳು ಬಂದಿದ್ದರಾ ಎಂಬ ಪ್ರಶ್ನೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಶ್ಯಾಮನೂರು ಶಿವಶಂಕರಪ್ಪ , ಡಿ.ಕೆ.ಶಿವಕುಮಾರ್‌ ಸೇರಿದಂತೆ ಬಹುತೇಕ ನಾಯಕರ ಉತ್ತರ “ ಯಾರೂ ಬಂದಿಲ್ಲ” ಎಂದು!!

ಯಾರ ಮನೆಗೂ ಹೋಗದೆ , ಯಾರ ಬಳಿಯೂ ದಾಖಲೆ ಕೇಳದೆ ನಡೆಸಿದ ಜಾತಿಗಣತಿ ಅದು ಹೇಗೆ ವೈಜ್ಞಾನಿಕವಾಗುತ್ತದೆ ಎಂಬುದಕ್ಕೆ ಸಿದ್ದರಾಮಯ್ಯ ಮತ್ತವರ ವಂಧಿಮಾಗದರು ಇಲ್ಲಸಲ್ಲದ ಸಮಜಾಯಿಷಿ ನೀಡಿದ್ದರು. ಆದರೆ ಕೊನೆಗೂ “ಸತ್ಯಮೇವ ಜಯತೇ” ಎಂಬಂತೆ ತಮ್ಮ ಸರ್ಕಾರ ಈ ಹಿಂದೆ ನಡೆಸಿದ ಜಾತಿಗಣತಿ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಮತ್ತೊಮ್ಮೆ ಜಾತಿಗಣತಿ ನಡೆಸುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯ ಅವರೆ ದೆಹಲಿಯಲ್ಲಿ ತಮ್ಮ ನಾಯಕರ ಮುಂದೆ ಹೇಳಿಕೆ ನೀಡಿದ್ದಾರೆ.

ಆದರೆ ಇವರ ಸ್ವಾರ್ಥಕ್ಕಾಗಿ ಜಾತಿಗಣತಿಯನ್ನು ನಡೆಸಲು ಕಾಂತರಾಜ್‌ ಆಯೋಗಕ್ಕೆ ಹಾಗೂ ಇನ್ನಿತರ ಕೆಲಸಗಳಿಗಾಗಿ ಸರ್ಕಾರದಿಂದ ಒಟ್ಟು ₹165 ಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಜಾತಿಗಣತಿ ವರದಿ ಅವೈಜ್ಞಾನಿಕ ಎಂದ ಮೇಲೆ ಕನ್ನಡಿಗರ ಶ್ರಮದ ₹165 ಕೋಟಿ ತೆರಿಗೆ ಹಣವನ್ನು ಪೋಲು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ..?? ಈ ₹165 ಕೋಟಿಯನ್ನು ಸಾರ್ವಜನಿಕ ಹಿತಾಸಕ್ತಿಗೆ ಬಳಸದೆ ಅವೈಜ್ಞಾನಿಕ ಜಾತಿಗಣತಿ ಸಿದ್ದಪಡಿಸಲು ಪೋಲು ಮಾಡಿರುವ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.

ಅದಲ್ಲದೆ 2027ಕ್ಕೆ ಕೇಂದ್ರ ಸರ್ಕಾರವೇ ಜಾತಿಗಣತಿ ನಡೆಸುತ್ತಿದ್ದು ಈಗ ಮತ್ತೊಮ್ಮೆ ರಾಜ್ಯ ಸರ್ಕಾರ ಜಾತಿಗಣತಿ ನಡೆಸಿ, ಮತ್ತೊಂದಿಷ್ಟು ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡುವ ಬದಲು, ತನ್ನ ಆಡಳಿತದತ್ತ ಗಮನ ಹರಿಸಲಿ ಎಂದು ನಾವು ಒತ್ತಾಯಿಸುತ್ತೇವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande