ಗದಗ, 10 ಜೂನ್ (ಹಿ.ಸ.) :
ಆ್ಯಂಕರ್ : ಕಡು ಬಡವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ಒಂದು ಉತ್ತಮ ವೇದಿಕೆಯಾಗುವಂತೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ಕಾರ್ಯವಾಗಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ 8 ಕೋಟಿ 65 ಲಕ್ಷ ರೂ ಅನುದಾನದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಶಾಲಾ-ಕಾಲೇಜುಗಳು ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಫಲಿತಾಂಶ ಸಾಧಿಸುವಲ್ಲಿ ಯಶಸ್ವಿಯಾಗಿವೆ. ರೈತರು ಮತ್ತು ಈ ಭಾಗದ ರೈತರ ಮಕ್ಕಳು ಶೈಕ್ಷಣಿಕ ಪ್ರಗತಿ ಹೊಂದಬೇಕು. ಈ ಹಿನ್ನೆಲೆಯಲ್ಲಿ ತೋಟಗಾರಿಕಾ ಕಾಲೇಜಿಗೆ 150 ಕೋಟಿ ರೂ ಅನುದಾನದ ಅಗತ್ಯವಿದೆ. ಮೊದಲ ಹಂತದಲ್ಲಿ 45 ಕೋಟಿ ರೂ ವೆಚ್ಚದಲ್ಲಿ ಕಾಲೇಜಿನ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
ಗದಗ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿ ಅಮಿತ ಬಿದರಿ ಮಾತನಾಡಿ, 120 ವಿದ್ಯಾರ್ಥಿಗಳ ವಸತಿ ನಿಲಯದ ಕಟ್ಟಡ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಗಾಗಿ ಈ ಕಟ್ಟಡ ನಿರ್ಮಾಣದ ಕಾಮಗಾರಿ ಅನೂಕೂಲವಾಗಲಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಕೆಎಎಸ್, ಐಎಎಸ್, ಪಿಎಸ್ಐ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ಇಲಾಖೆಯಿಂದ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ತಾಲೂಕಾಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರು ಡಂಬಳ ಹೋಜುಳಿ ಭಾಗದಲ್ಲಿ ಅತಿ ಹೆಚ್ಚು ಅನುದಾನ ನೀಡುವುದರ ಮೂಲಕ ಡಾಂಬರು ರಸ್ತೆ, ಸಿ.ಸಿ ರಸ್ತೆ, ರೈತರ ಹಿತ ಕಾಯುವುದಕ್ಕಾಗಿ ಕಾಲುವೆಗಳ ನಿರ್ಮಾಣ, ಶೈಕ್ಷಣಿಕ ಪ್ರಗತಿಗಾಗಿ ಹಲವು ವಸತಿ ನಿಲಯಗಳ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸುವುದರ ಮೂಲಕ ಈ ಭಾಗದ ರೈತರ, ಕೂಲಿ ಕಾರ್ಮಿಕರ ವಿದ್ಯಾರ್ಥಿಗಳ ಪ್ರಗತಿಗಾಗಿ ಶ್ರಮಿಸುತ್ತಿರುವ ಧೀಮಂತ ನಾಯಕರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ದುರಗಮ್ಮ ತಳಗೇರಿ, ಗೋಣಿಬಸಪ್ಪ ಕೊರ್ಲಹಳ್ಳಿ, ಬಸುರಡ್ಡಿ ಬಂಡಿಹಾಳ, ಮರಿಯಪ್ಪ ಸಿದ್ದಣ್ಣವರ, ಶರಣಪ್ಪ ಬಂಡಿಹಾಳ, ಯಮನಪ್ಪ, ಚುಂಗಿನ, ಶೋಭಾ ಮೇಟಿ, ಭುವನೇಶ್ವರಿ ಕಲ್ಲಕುಟಿಗರ, ಸೋಮಪ್ಪ ಹೈತಾರ, ಹೇಮಂತ ಹಾರೂಗೇರಿ, ಹಾಲಪ್ಪ ಅಮರಗೋಳ, ಅಮರೇಶ ಹಿರೇಮಠ, ಈರಣ್ಣ ಬೆಂಚಿ, ಬಸುರಾಜ ಮೇಟಿ, ನಿಂಗಪ್ಪ ಪೆದ್ದಾರ, ಶಿವು ಚಿಕ್ಕಣ್ಣವರ, ಕುಮಾರ ಸಿದ್ದೆಕೊಪ್ಪ, ಕುಮಾರ ಉದ್ದಂಡಿ, ಪ್ರಥಮ ದರ್ಜೆ ಗುತ್ತಿಗೆದಾರ ಅಜರುದ್ದಿನ ದ್ಯಾಂಪುರ, ವಿಜಯ ಮುಳಗುಂದ, ಕನಕಮೂರ್ತಿ, ಮಳ್ಳಪ್ಪ ಒಂಟಲಭೋವಿ ಸೇರಿದಂತೆ ಗ್ರಾಮದ ಹಿರಿಯರು. ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP