ತುಮಕೂರು, 31 ಮೇ (ಹಿ.ಸ.) :
ಆ್ಯಂಕರ್ : ತುಮಕೂರು ಜಿಲ್ಲೆಯ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ತುಮಕೂರು ಜಿಲ್ಲೆಯ ಭಾಗಗಳಲ್ಲಿ ರೈತರು, ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೆಲವು ಕಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಗುಬ್ಬಿ ತಾಲೂಕಿನ ಸುಂಕಾಪುರ ಹಾಗೂ ಡಿ ರಾಮಪುರದಲ್ಲಿ ನೂರಾರು ರೈತರು ರಸ್ತೆ ತಡೆ ನಡೆಸಿ ಟೈರುಗಳಿಗೆ ಬೆಂಕಿ ಹಚ್ಚಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಲ್ಲಸಂದ್ರದ ಬಳಿ ಬಿಜೆಪಿ ಶಾಸಕರು ಜ್ಯೋತಿಗಣೇಶ್ ಮತ್ತು ಸುರೇಶ್ ಗೌಡ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೆಲವು ಮಠಾಧೀಶರೂ ಸಹ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಹೋರಾಟ ತೀವ್ರಗೊಂಡ ಹಿನ್ನೆಲೆ, ಜಿಲ್ಲಾಡಳಿತ ತಾತ್ಕಾಲಿಕವಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ, ಸುಂಕಾಪುರ ನಾಲೆಯ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಜಮಾವಣೆ ನಿರ್ಬಂಧಿಸಲಾಗಿದೆ.
ರಾಜ್ಯ ಸರ್ಕಾರ ಗೊರೂರು ಜಲಾಶಯದಿಂದ ಮಾಗಡಿ ತಾಲೂಕಿಗೆ ಪೈಪ್ಲೈನ್ ಮೂಲಕ 0.75 ಟಿಎಂಸಿ ನೀರು ಹರಿಸಲು ಆರಂಭಿಸಿದ ಕಾಮಗಾರಿ ಈ ಹೋರಾಟಕ್ಕೆ ಕಾರಣವಾಗಿದೆ. ರೈತರು ಮತ್ತು ಸ್ಥಳೀಯ ರಾಜಕಾರಣಿಗಳು ಈ ಯೋಜನೆಯಿಂದ ತುಮಕೂರು ಜಿಲ್ಲೆಯ ಇತರ ತಾಲ್ಲೂಕುಗಳಿಗೆ ನೀರಿನ ತೊಂದರೆಯಾಗುವ ಆತಂಕ ವ್ಯಕ್ತಪಡಿಸಿದ್ದಾರೆ.
ಈವರೆಗೆ ತುಮಕೂರು ಜಿಲ್ಲೆಗೆ ವಾಗ್ದಾನ ಮಾಡಿದ 24 ಟಿಎಂಸಿ ಹೇಮಾವತಿ ನೀರು ಸಂಪೂರ್ಣವಾಗಿ ಬಂದಿಲ್ಲ. ಇಷ್ಟು ಪ್ರಮಾಣದ ನೀರು ಬಾರದಿರುವಾಗ ಮತ್ತಷ್ಟು ಕತ್ತರಿಸಿ ಮಾಗಡಿಗೆ ನೀರು ಹರಿಸುವುದು ಅನ್ಯಾಯ ಎಂಬುದು ರೈತರ ವಾದವಾಗಿದೆ.
ಪ್ರಸ್ತುತ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ, ರೈತರು ಹಾಗೂ ಸ್ಥಳೀಯರು ಸಂಪೂರ್ಣವಾಗಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಯೋಜನೆ ಸಂಪೂರ್ಣವಾಗಿ ಸ್ಥಗಿತಗೊಳ್ಳದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa