ರಾಯಚೂರು, 29 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ದಿನೇದಿನೆ ಕೋವಿಡ್-19ರ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಜಿಲ್ಲೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕರು ಭಯಪಡದೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಕೋವಿಡ್-19ರ ಪರೀಕ್ಷೆಗಾಗಿ ರ್ಯಾಟ್ ಟೆಸ್ಟ್ ವೈದ್ಯರ ಸಲಹೆ ಮೇರೆಗೆ ರಿಮ್ಸ್ ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ವಿಮ್ಸ್ ಬಳ್ಳಾರಿ ಪ್ರಯೋಗಾಲಯ ನಿಗದಿ ಪಡಿಸಿರುವುದರಿಂದ ಎಲ್ಲಾ ಮಾದರಿಗಳನ್ನು ಅಲ್ಲಿಯೇ ಪರೀಕ್ಷೆಗೆ ಒಳಪಡಿಸಲಾಗುವುದು.
ಜಿಲ್ಲೆಯ ರಿಮ್ಸ್ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ವಾರ್ಡ್ ಮತ್ತು 5 ಐ.ಸಿ.ಯು. ಹಾಸಿಗೆಗಳು ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 5 ಹಾಸಿಗೆಗಳ ವಾರ್ಡ್ನ್ನು ಕಾಯ್ದಿರಿಸಲಾಗಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಸಾರ್ವಜನಿಕರು ಭಯಪಡುವ ಅವಶ್ಯಕತೆ ಇರುವುದಿಲ್ಲ. ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅವಶ್ಯಕವಾಗಿರುತ್ತದೆ.
ಎಲ್ಲ್ಲಾ ಸಾರಿ ಪ್ರಕರಣಗಳಿಗೆ ಕಡ್ಡಾಯವಾಗಿ ಕೋವಿಡ್-19ರ ಪರೀಕ್ಷೆ ಮಾಡಿಸುವುದು., ವಯೋವೃದ್ಧರಲ್ಲಿ, ಮಕ್ಕಳಲ್ಲಿ, ಗರ್ಭಿಣಿಯರಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆ ಮಾಡಿಸುವುದು, ಶೀತ, ನೆಗಡಿ, ಜ್ವರ ಇರುವ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸದಿರುವುದು ಉತ್ತಮ., ಆಗಾಗ್ಗೆ ಸಾಬೂನಿನಿಂದ ಅಥವಾ ಸೆನಿಟ್ಯಾಜರ್ನಿಂದ ಕೈ ತೊಳೆಯಬೇಕು., ಕೆಮ್ಮುವಾಗ ಅಥವಾ ಶೀನುವಾಗ ಕರವಸ್ತ್ರ ಉಪಯೋಗಿಸುವುದು., ಯಾವುದೇ ತರಹದ ಕೆಮ್ಮು, ನೆಗಡಿ, ಗಂಟಲು ನೋವು, ಜ್ವರ ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು.
ಖಚಿತ ಪ್ರಕರಣಗಳಲ್ಲಿ ಅಲ್ಪಪ್ರಮಾಣದ ಲಕ್ಷಣಗಳು ಇರುವ ರೋಗಿಗಳಿಗೆ ಹೋಮ್ ಐಸೋಲೆಷನ್ ಮಾಡಲಾಗುವುದು. ತೀವ್ರತರದ ರೋಗ ಲಕ್ಷಣಗಳು ಇರುವವರಿಗೆ ರಾಯಚೂರು ರಿಮ್ಸ್ ಮತ್ತು ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್