ಕಲಬುರಗಿ, 28 ಮೇ (ಹಿ.ಸ.)
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ, ಎಂಎಲ್ಸಿ ಎನ್. ರವಿಕುಮಾರ್ ಅವರ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ರಾಜ್ಯ ಸರ್ಕಾರ ಜಾತಿ ನಿಂದನೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿಯ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಆರಂಭಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬಿಜೆಪಿಯ ಪ್ರತಿಭಟನಾ ಸಮಾವೇಶದಲ್ಲಿ ರವಿಕುಮಾರ್ ಅವರು ಜಾತಿ ನಿಂದನೆ ಮಾಡುವಂತಹ ಯಾವುದೇ ಹೇಳಿಕೆ ನೀಡಲೇ ಇಲ್ಲ ಆದರೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆ ಮೇರೆಗೆ ಯಾರೋ ಅವಿವೇಕಿ ದೂರು ಕೊಟ್ಟ ತಕ್ಷಣ ಪೊಲೀಸರು ರವಿಕುಮಾರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ರವಿಕುಮಾರ್ ಅವರು ಮಾತನಾಡುವ ಭರದಲ್ಲಿ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನದಿಂದ ಬಂದಿದ್ದಾರೆ ಏನೋ ಗೊತ್ತಿಲ್ಲ ಎಂದು ಹೇಳಿದ್ದಾರೆ ಆನಂತರ ಅವರು ಅದರ ಕುರಿತು ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ. ಆಗ ಆ ಪ್ರಕರಣವೇ ಮುಗಿತ್ತು. ಆದರೆ ಪೊಲೀಸರು ಪೂರ್ವನಿಯೋಜಿತವಾಗಿ ವ್ಯಕ್ತಿಯೊಬ್ಬನಿಂದ ದೂರು ಪಡೆದು ತಕ್ಷಣ ಜಾತಿ ನಿಂದನೆ ಕೇಸ್ ದಾಖಲಿಸಿಕೊಂಡಿದ್ದಾರೆ. ಹೇಗೆ ಪೊಲೀಸರು ಎಲ್ಲಾ ಪ್ರಕರಣಕ್ಕೂ ತಕ್ಷಣ ಕೇಸ್ ದಾಖಲಿಸಿಕೊಂಡರೆ ಎರಡು ವರ್ಷದಲ್ಲಿ ಜಿಲ್ಲೆ ರಾಮ ರಾಜ್ಯವಾಗುತ್ತಿತ್ತು ಎಂದು ಲೇವಡಿ ಮಾಡಿದರು.
ಈ ಹಿಂದೆ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಹಲವರನ್ನು ಅಪಹರಣ ಮಾಡುವ ಹುನ್ನಾರ ಪ್ರಕರಣ ಕುರಿತು ನಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ಕೇಸ್ ದಾಖಲಿಸಿಕೊಳ್ಳಲೇ ಇಲ್ಲ ಅದೇ ರೀತಿ ಅಂಬಾರಾಯ ಅಷ್ಟಗಿ ಮೇಲೆ ಹಲ್ಲೆ ಮಾಡಿದ ಪ್ರಕರಣ ಸೇರಿದಂತೆ ಬಿಜೆಪಿ ಮುಖಂಡರ ಮತ್ತು ಸಾರ್ವಜನಿಕರ ಹಲವಾರು ಪ್ರಕರಣ ಕುರಿತು ದೂರು ನೀಡಲು ಹೋದರೆ ಪೊಲೀಸರು ಎಫ್ ಐಆರ್ ಮಾಡುವುದೇ ಇಲ್ಲ ವಿನಾಕಾರಣ ಸತಾಯಿಸಿ ವಾಪಸ್ ಕಳಿಸುವಂತ ಪ್ರವೃತ್ತಿ ಬೆಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ವಂಚನೆ, ಅತ್ಯಾಚಾರ, ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಈ ಕುರಿತು ಅನ್ಯಾಯಕ್ಕೊಳಗಾದವರು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ದೂರು ಪಡೆಯದೆ ನಿರ್ಲಕ್ಷ್ಯ ವಹಿಸುತ್ತಿರುವ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜಿಲ್ಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಣತಿಯಂತೆ ಪೊಲೀಸರು ಕೆಲಸ ಮಾಡುತ್ತಿರುವುದರಿಂದ ಸಾಮಾನ್ಯ ಜನರನ್ನು ಭಯಭೀತರನ್ನಾಗಿ ಮಾಡಿದೆ ಎಂದು ಆರಂಭಿಸಿದರು.
ಕೂಡಲೇ ಪೊಲೀಸ್ ಇಲಾಖೆ ಎನ್. ರವಿಕುಮಾರ್ ವಿರುದ್ಧ ದಾಖಲಾಗಿರುವ ಅಟ್ರಾಸಿಟಿ ಕೇಸ್ ಕೂಡಲೇ ರದ್ದು ಪಡಿಸಬೇಕು ಮತ್ತು ಬಿಜೆಪಿ ಮುಖಂಡರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಎಂಎಲ್ಸಿ ಬಿ.ಜಿ.ಪಾಟೀಲ್, ಮುಖಂಡರಾದ ಶರಣಪ್ಪ ತಳವಾರ್, ದಿಲೀಪ್ ಪಾಟೀಲ್, ಅವ್ವಣ್ಣ ಮ್ಯಾಕೇರಿ, ಅಂಬಾರಾಯ ಅಷ್ಟಗಿ, ಶಿವರಾಜ್ ರದ್ದೇವಾಡಗಿ, ಧರ್ಮಣ್ಣ ಇಟಗಿ, ದಿಲೀಪ್ ಪಾಟೀಲ್ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / Samarth biral