

ಬೆಂಗಳೂರು, 25 ನವೆಂಬರ್ (ಹಿ.ಸ.) :
ಆ್ಯಂಕರ್ : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಲ್ಲಿ, ನೀವು ನನ್ನ ರೀತಿ ಗಗನಯಾನಿ ಆಗಬಹುದು ಎಂದು' ಗಗನಯಾನಿ ಶುಭಾಂಶು ಶುಕ್ಲಾ ಹೇಳಿದರು.
ಕರ್ನಾಟಕ ಸರಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆವತಿಯಿಂದ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ಆಯೋಜಿಸಿದ್ದ ಆಕ್ಸಿಯಂ ಸ್ಪೇಸ್-4 ಮಿಷನ್ ಯಶಸ್ವಿಯ ರುವಾರಿಯಾಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಅಭಿನಂದನೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. `ನೀವು ಸಹ ನನ್ನಂತೆಯೇ ಗಗನಯಾನಿ ಆಗಬಹುದು. ಆದರೆ, ಇದೊಂದೇ ಆಗಬೇಕೆಂದು ಕನಸು ಕಾಣಬೇಡಿ. ಏಕೆಂದರೆ, ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾನು ಹೀರೋ ರೀತಿ ನಿಮಗೆ ಕಾಣಬಹುದು. ಆದರೆ, ನನ್ನ ಯಾತ್ರೆಗೆ ಸಾವಿರಾರೂ ಮಂದಿ ಕೆಲಸ ಮಾಡಿದ್ದಾರೆ. ಎಂಜಿನಿಯರ್, ವೈದ್ಯರು ಹೀಗೆ ಸಾಕಷ್ಟು ಮಂದಿ ಇದ್ದಾರೆ. ಅವರಂತೆ ನೀವು ಆಗಬಹುದು' ಎಂದರು.
`ನನ್ನ ಗಗನಯಾನಕ್ಕೆ ಸಾಕಷ್ಟು ಜನರ ಸ್ಪೂರ್ತಿ ಇದೆ. ಹೀಗಾಗಿ ಹಲವರ ಹೆಸರು ಹೇಳುವುದು ಕಷ್ಟ. ಗಗನಯಾನಿ ರಾಕೇಶ್ ಶರ್ಮಾ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನೀವು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವ ಛಲ ಇರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ತಾಳ್ಮೆ ಇರಬೇಕು. ಏಕೆಂದರೆ, ನಾನು 20 ದಿನಗಳ ಯಾತ್ರೆಗೆ 5 ವರ್ಷಗಳ ತರಬೇತಿ ಪಡೆದಿದ್ದೇನೆ' ಎಂದರು.
`ಗಗನಯಾನ ನೀವು ಅಂದುಕೊಂಡಷ್ಟು ಸುಲಭವಾಗಿಲ್ಲ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ತೀರಾ ಕಷ್ಟ. ಬಾಹ್ಯಾಕಾಶಕ್ಕೆ ಹೋದ ಮೇಲೆ ನಾನು ಗಾಳಿಯಲ್ಲಿ ತೇಲಾಡುವುದು ಅಭ್ಯಾಸ ಮಾಡಿಕೊಂಡೆ. ಅಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಳ್ಳಲಾಯಿತು. ಭೂಮಿಗೆ ಬರುವಾಗ ತುಂಬಾ ಕಷ್ಟವಾಗಿತ್ತು. ಬಂದ ಮೇಲೆ ಒಂದು ವಾರದ ವರೆಗೆ ನನಗೆ ನೇರವಾಗಿ ನಿಂತುಕೊಳ್ಳುವುದಕ್ಕೆ ಸಹ ಆಗುತ್ತಿರಲಿಲ್ಲ ಎನ್ನುವ ಮೂಲಕ ಶುಕ್ಲಾ ತಮ್ಮ ಅನುಭವನ್ನು ವಿದ್ಯಾರ್ಥಿಗಳ ಎದುರು ಬಿಚ್ಚಿಟ್ಟರು'.
ನಾನು 16-17 ವರ್ಷಗಳಿಂದ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಎಂದಿಗೂ ಟಚ್ ಸ್ಕ್ರೀನ್ ಬಳಕೆ ಮಾಡಿ ಏರ್ಕ್ರಾಫ್ಟ್, ಸ್ಪೇಸ್ ಕ್ರಾಫ್ಟ್ ಹಾರಾಟ ನಡೆಸಿರಲಿಲ್ಲ. ಆದರೆ, ಆಮೆರಿಕದ ಸ್ಪೇಸ್ ಎಕ್ಸ್ನ ಬಾಹ್ಯಾಕಾಶ ಯೋಜನೆಯು ಕ್ರೂ ಡ್ಯ್ರಾಗನ್ ಅನ್ನು ಕೇವಲ ಟಚ್ ಸ್ಕ್ರೀನ್ ನಲ್ಲಿ ನಿಯಂತ್ರಿಸಬಹುದು. ಬಾಹ್ಯಕಾಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದರೆ, 18-20 ಜಿಪೋರ್ಸ್ ಮೈ ಮೇಲೆ ಬೀಳುತ್ತದೆ. ಅಂದರೆ, ಒಂದು ಮರಿಯಾನೆ ಎದೆಯ ಮೇಲೆ ಕುಳಿತಂತೆ ಭಾಸವಾಗುತ್ತದೆ ಎಂದು ಕ್ಲಿಷ್ಟಕರ ವಿಚಾರಗಳನ್ನು ತಿಳಿಸಿದರು.
ಇದೇ ವೇಳೆ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ,`ನಿಮ್ಮ ಕೆಲಸದ ಮೂಲಕ ಭಾರತೀಯ ವಿಜ್ಞಾನಕ್ಕೆ ನೀವು ಕೇವಲ ಕೊಡುಗೆ ನೀಡುವುದು ಮಾತ್ರವಲ್ಲ, ಜಾಗತಿಕ ಜ್ಞಾನವನ್ನು ನಿರೂಪಿಸಿದ್ದೀರಿ. ನೀವು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಾಲಿಟ್ಟಾಗ, ನೀವು ಕೇವಲ ರಾಷ್ಟ್ರಧ್ವಜವನ್ನೇ ಅಲ್ಲ, ಎಲ್ಲಾ ಭಾರತೀಯರ ಕನಸುಗಳನ್ನು ಕೂಡ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದು, ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ' ಎಂದರು.
ಈ ಸಮಾರಂಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುಳಾ, ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಇತರರು ಇದ್ದರು. ರಾಜ್ಯದ ಜಿಲ್ಲೆಗಳಿಂದ ಆಗಮಿಸಿದ್ದ ಸರಕಾರಿ, ಖಾಸಗಿ ಶಾಲಾ ಮಕ್ಕಳು ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa