
ಕೊಪ್ಪಳ, 22 ನವೆಂಬರ್ (ಹಿ.ಸ.) :
ಆ್ಯಂಕರ್ : ಪುಸ್ತಕ ಓದುವವರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ತೆರೆಯಬೇಕೆಂಬ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಹೇಳಿದರು.
ಅವರು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಉದ್ದೇಶ ಕಲೆ, ನಾಟಕಕ್ಕೆ ಒಂದೊಂದು ಪ್ರಾಧಿಕಾರಗಳಿರುವಂತೆ ಪುಸ್ತಕಕ್ಕಾಗಿಯೇ ಒಂದು ಪ್ರಾಧಿಕಾರವಿದೆ. ಈಗಿನ ಕಾಲದಲ್ಲಿ ಪುಸ್ತಕ ಪ್ರಕಟಿಸುವವರ ಸಂಖ್ಯೆ ಹೆಚ್ಚಾಗಿದೆ ಆದರೆ, ಪುಸ್ತಕ ಓದುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಾಗಾಗಿ ಪುಸ್ತಕ ಓದುವವರ ಸಂಖ್ಯೆ ಹೆಚ್ಚಿಸಬೇಕೆಂಬ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ತೆರೆಯಬೇಕೆಂಬ ಯೋಜನೆಯನ್ನು ಜಾರಿ ಮಾಡಲಾಗಿದೆ. ಮನೆಗೊಂದು ಗ್ರಂಥಾಲಯ ಎಂದರೆ, ದೊಡ್ಡ ಪ್ರಮಾಣದಲ್ಲಿ ಮಾಡಬೇಕೆಂದೆನೂ ಇಲ್ಲ, ಒಂದು ಸಣ್ಣಮನೆಯಲ್ಲಿಯೂ ಕೂಡಾ ಲೈಬ್ರರಿ ಮಾಡಬಹುದು. ಮನೆಯಲ್ಲಿ ಟಿವಿಯ ಪಕ್ಕದಲ್ಲಿಯೋ ಅಥವಾ ಎಲ್ಲಿ ಜಾಗವಿರುತ್ತದೆಯೋ ಅಲ್ಲಿ ಒಂದು ಪುಸ್ತಕದ ಸ್ಟ್ಯಾಂಡ್ ಇಟ್ಟು ಮನೆಯಲ್ಲಿ ಎಲ್ಲಿ ಬೇಕೆಂದರಲ್ಲಿ ಇಟ್ಟಿರುವ ಪುಸ್ತಕಗಳನ್ನು ನೀಟಾಕಿ ಸ್ಟ್ಯಾಂಡಿನಲ್ಲಿ ಜೋಡಿಸಿಟ್ಟರೆ ಅದೇ ಒಂದು ಗ್ರಂಥಾಲಯ ಆಗುತ್ತದೆ. ಮನೆಗೆ ಬರುವವರು ಮೊದಲು ಪುಸ್ತಕದ ಕಡೆ ಕಣ್ಣಾಯಿಸುತ್ತಾರೆ. ನಾವೂ ನಮ್ಮ ಮನೆಯಲ್ಲಿ ಈತರದ ಲೈಬ್ರರಿ ಮಾಡಬಹುದಲ್ಲ ಎಂಬ ಆಲೋಚನೆ ಅವರಲ್ಲಿ ಮೂಡುತ್ತದೆ. ಹಾಗ ನಿಮ್ಮ ಗೌರವೂ ಹೆಚ್ಚುತ್ತದೆ. ಯಾರೂ ಉತ್ತಮವಾಗಿ ಗ್ರಂಥಾಲಯವನ್ನು ಮಾಡಿ, ಉಪಯುಕ್ತವಾಗಿ ನಿರ್ವಹಿಸುತ್ತಾರೋ ಅಂಥವರನ್ನು ಹುಡುಕಿ ರಾಜ್ಯ ಸರ್ಕಾರದಿಂದ ನಗದು ಸಹಿತ ಪ್ರಶಸ್ತಿ ಕೊಡಿಸಲಾಗುವುದು ಮತ್ತು ಮುಖ್ಯಮಂತ್ರಿಗಳಿಂದ ಸನ್ಮಾನಿಸಲಾಗುವುದು ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಲ್ಲಾ ಎಮ್.ಎಲ್.ಎ. ಎಂಪಿ. ಮತ್ತು ಮಂತ್ರಿಗಳ ಮನೆಯಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗುವುದು. ಗಾಂಧಿಜಿಯವರು ಹೇಳಿದಂತೆ ನೀನು ಮೈಮೇಲೆ ಚಿಂದಿ ಬಟ್ಟೆ ಹಾಕಿಕೊಂಡು ಕೈಯಲ್ಲಿ ಪುಸ್ತಕ ಹಿಡಿದು ನನ್ನ ಪಕ್ಕದಲ್ಲಿ ಕುಳಿತರೂ ನನಗೆ ಚಿಂತೆಯಿಲ್ಲ ಅಭಿಮಾನದಿಂದ ನನ್ನ ಪಕ್ಕದಲ್ಲಿ ಕೂರಿಸಿಕೊಳ್ಳುತ್ತೇನೆ. ಆದರೆ, ಮೈಮೇಲೆ ಚಿನ್ನದ ಬಟ್ಟೆ ಹಾಕಿಕೊಂದು ಕೈಯಲ್ಲಿ ಪುಸ್ತಕ ಇಲ್ಲದಿದ್ದರೆ ನನಗೆ ಚಿಂತೆಯಾಗುತ್ತದೆ ಎಂದು ಹೇಳಿದ್ದರು, ಅಂದರೆ ಅವರಿಗೆ ಪುಸ್ತಕದ ಬಗ್ಗೆ ಅಪಾರವಾದ ಗೌರವ ಇತ್ತು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಮಾತನಾಡಿ, ಪ್ರತಿಯೊಂದು ಮನೆಗೆ ಹೇಗೆ ಒಂದು ಹಾಲ್, ಒಂದು ದೇವರ ಕೋಣೆ, ಒಂದು ಬೆಡ್ ರೂಮ್, ಟಿವಿ, ಹೋಂಥಿಯೆಟರ್ ನಂತಹ ಐಷರಾಮಿ ಅಲಂಕಾರಿಕ ವಸ್ತುಗಳಿರುವಂತೆ ಒಂದು ಪುಸ್ತಕ ರೂಮ್, ಅಥವಾ ಗ್ರಂಥಾಲಯ ಇರಬೇಕು ಎನ್ನುವುದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರ ಪರಿಕಲ್ಪನೆಯಾಗಿದೆ ಎಂದು ಹೇಳಿದರು
ಮನೆಯಲ್ಲಿ ಮಿನಿ ಗ್ರಂಥಾಲಯ ಇದ್ದರೆ ಕುಟುಂಬದವರು ಅಥವಾ ಮಕ್ಕಳು ಒಂದಿಲ್ಲೊಂದುದಿನ ಒಂದಾದರೂ ಪುಸ್ತಕ ಓದೇ ಓದುತ್ತಾರೆ ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮನೆಗೊಂದು ಗ್ರಂಥಾಲಯವನ್ನು ಮೊಟ್ಟ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯನವರ ಮನೆಯಲ್ಲಿ ಅನಾವರಣಗೊಳಿಸಲಾಗಿದೆ, ಮೊದಲನೆಯದು ಬೆಂಗಳೂರಲ್ಲಾದರೆ ಎರಡನೆಯದು ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ಧೇಶಕ ಕರಣಕುಮಾರ್ ಅವರು ಮಾತನಾಡಿದರು. ಡಾ. ರಾಜಕುಮಾರ್ ನಿರೂಪಿಸಿದರು.
ಈ ವೇಳೆ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಜಾಗೃತಿ ಸಮಿತಿಯ ಸಂಚಾಲಕರಾದ ಜಿ.ಎಸ್. ಗೋನಾಳ, ಸದಸ್ಯರಾದ ಡಾ. ಫಕೀರಪ್ಪ ವಜ್ರಬಂಡಿ, ಮಹಮ್ಮದ್ ರಫಿ ಮರ್ದಾನ್ ಸಾಬ್, ಅರಳಿನಾಗಭೂಷಣ್, ಶರಣಪ್ಪ ಕೊಟ್ಯಾಳ್, ರವೀಂದ್ರ ಬಾಕಳೆ, ಕರಿಸಿದ್ದನಗೌಡ ಮಾಲಿಪಾಟೀಲ್, ಬಸವರಾಜ ಬೋದೂರು, ಅಂಜನಾದೇವಿ ಶಾಂತಮೂರ್ತಿ ಹಾಗೂ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಉಮ್ಮೇಶ್ ಸುರ್ವೆ, ಡಾ. ನಾಗರಾಜ ದಂಡೋತಿ ಸೇರಿದಂತೆ ಅನೇಕರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್