
ಬೆಂಗಳೂರು, 17 ನವೆಂಬರ್ (ಹಿ.ಸ.):
ಆ್ಯಂಕರ್:
ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿ, ಕೋಡಿಹಳ್ಳಿ ಮತ್ತು ದೇವರಕೊಟ್ಟ ಪ್ರದೇಶಗಳಲ್ಲಿ 66/11 ಕೆ.ವಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಭೂಮಿ ಈಗಾಗಲೇ ಲಭ್ಯವಾಗಿರುವುದರಿಂದ, ಸರ್ಕಾರದ ಮೊದಲ ಹಂತದ ಮಂಜೂರಾತಿಗೆ ಸೇರಿಸಿ ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಸೂಚಿಸಿದರು.
ಬುರುಜನರೊಪ್ಪ ವಿದ್ಯುತ್ ಸ್ಥಾವರಕ್ಕೆ ಸರ್ಕಾರಿ ಭೂಮಿ ಲಭ್ಯವಿಲ್ಲದ ಕಾರಣ ಖಾಸಗಿ ಭೂಮಿ ಖರೀದಿಸಿ ನಿರ್ಮಾಣ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ವಿ.ವಿ.ಸಾಗರದಿಂದ ಕುಡಿಯುವ ನೀರು ಪೂರೈಕೆಗೆ ವೋಲ್ಟೇಜ್ ವ್ಯತ್ಯಯ ತೊಂದರೆ ಉಂಟಾಗದಂತೆ ಭರಮಗಿರಿ ಮತ್ತು ಕಲಮರಹಳ್ಳಿ ವಿದ್ಯುತ್ ಉಪಕೇಂದ್ರಗಳ ಸಾಮರ್ಥ್ಯವನ್ನು 12.5 ಎಂ.ವಿ.ಎ.ಯಿಂದ 20 ಎಂ.ವಿ.ಎ.ಗೆ ಮೇಲ್ದರ್ಜೆಗೇರಿಸಲು ಸಲ್ಲಿಸಿರುವ ಪ್ರಸ್ತಾವನೆಗಳಿಗೆ ತಕ್ಷಣ ಅನುಮೋದನೆ ನೀಡುವಂತೆ ಸಚಿವರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದರು.
ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಕೆಪಿಟಿಸಿಎಲ್ ಮುಖ್ಯ ಇಂಜಿನೀಯರ್ ಕಾಂತಲಕ್ಷ್ಮೀ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa