
ಹಾಸನ, 17 ನವೆಂಬರ್ (ಹಿ.ಸ.):
ಆ್ಯಂಕರ್:
ದೇಶದ ಏಕತೆಯ ಶಿಲ್ಪಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಹಾಸನದಲ್ಲಿ ಜಿಲ್ಲಾ ಮಟ್ಟದ ಏಕತಾ ನಡಿಗೆ ನೆರವೇರಿತು. ಹಾಸನ ರೈಲ್ವೆ ನಿಲ್ದಾಣದಿಂದ ಹಾಸನಾಂಬ ಕಲಾಕ್ಷೇತ್ರದವರೆಗೆ ನಡೆದ ಏಕತಾ ನಡಿಗೆಗೆ ಶಾಸಕ ಹೆಚ್.ಕೆ. ಸುರೇಶ್ ಚಾಲನೆ ನೀಡಿದರು.
“ನಮ್ಮ ದೇಶದ ಮೊದಲ ಉಪ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರಾಗಿ ದೇಶವನ್ನು ಏಕೀಕರಿಸಿದ ಮಹಾನ್ ನಾಯಕರು ಪಟೇಲ್. ಮುಂದಿನ ಪೀಳಿಗೆಗೆ ದೇಶಭಕ್ತಿಯ ಸಂದೇಶ ನೀಡಿದವರು” ಎಂದು ಶಾಸಕರು ತಿಳಿಸಿದರು. ಈ ಕಾರ್ಯಕ್ರಮವನ್ನು ಕೇಂದ್ರ – ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಎನ್ಎಸ್ಎಸ್, ಎನ್ಸಿಸಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, “560ಕ್ಕೂ ಹೆಚ್ಚು ಸಂಸ್ಥಾನಗಳನ್ನು ಏಕೀಕರಿಸಿ ಬಲಿಷ್ಠ ರಾಷ್ಟ್ರ ನಿರ್ಮಿಸಿದವರು ಉಕ್ಕಿನ ಮನುಷ್ಯ ಪಟೇಲ್” ಎಂದರು. ಯುವಕರು ಅವರಂತಹ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ಪ್ರಮಾಣ ವಚನ ಬೋಧಿಸಿದರು. ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ತಮ್ಮಯ್ಯ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆನಂದಮೂರ್ತಿ ಮತ್ತು ಅನೇಕ ಅಧಿಕಾರಿಗಳು, ವಿದ್ಯಾರ್ಥಿಗಳು, ಯುವ ಸಂಘಟನೆಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa