
ಕಲಬುರಗಿ, 13 ನವೆಂಬರ್ (ಹಿ.ಸ.) :
ಆ್ಯಂಕರ್ : ದೇಶದ ಗಮನ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆಯಲಿರುವ ಆರ್ಎಸ್ಎಸ್ ಪಥ ಸಂಚಲನ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಆರ್ಎಸ್ಎಸ್ ನಡುವಿನ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಲಬುರಗಿ ಹೈಕೋರ್ಟ್ ಪೀಠವು ನವೆಂಬರ್ 16ರಂದು ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.
ಹೈಕೋರ್ಟ್ ಆದೇಶದ ಪ್ರಕಾರ, ನ.೧೬ರಂದು ಮಧ್ಯಾಹ್ನ 3:30 ರಿಂದ ಸಂಜೆ 5:45ರ ವರೆಗೆ ಪಥಸಂಚಲನ ನಡೆಸಲು ಅವಕಾಶ ನೀಡಲಾಗಿದೆ. ಈ ವೇಳೆ ಅತಿ ಹೆಚ್ಚು 350 ಗಣವೇಷಧಾರಿಗಳು ಮಾತ್ರ ಭಾಗವಹಿಸಲು ಕೋರ್ಟ್ ಅನುಮತಿ ನೀಡಿದೆ. ಅದರಲ್ಲಿ 300 ಮಂದಿ ಗಣವೇಷಧಾರಿಗಳು ಹಾಗೂ 50 ಮಂದಿ ಬ್ಯಾಂಡ್ ಸದಸ್ಯರು ಇರಬಹುದು ಎಂದು ಸ್ಪಷ್ಟಪಡಿಸಲಾಗಿದೆ.
ಪಥಸಂಚಲನಕ್ಕೆ ಅನುಮತಿ ನೀಡುವ ಕುರಿತ ಅರ್ಜಿ ವಿಚಾರಣೆ ಇಂದು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ನಡೆಯಿತು. ಆರ್ಎಸ್ಎಸ್ ಪರ ವಕೀಲ ಅರುಣ್ ಶ್ಯಾಂ ಅವರು ಸಂಘದ 100ನೇ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ವಾದಿಸಿದರು.
ಇದಕ್ಕೆ ವಿರೋಧವಾಗಿ, ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಅವರು ಭದ್ರತಾ ದೃಷ್ಟಿಯಿಂದ 300 ಜನರಿಗೆ ಮಾತ್ರ ಅನುಮತಿ ನೀಡಬೇಕು ಎಂದು ವಾದ ಮಂಡಿಸಿದರು.
ಇದರಿಂದ ಕೋರ್ಟ್ ಮಧ್ಯಮ ಮಾರ್ಗ ಅನುಸರಿಸಿ 350 ಮಂದಿ ಪಾಲ್ಗೊಳ್ಳಲು ಮತ್ತು ನಿಗದಿತ ಸಮಯದೊಳಗೆ ಪಥಸಂಚಲನ ಮುಗಿಸಬೇಕೆಂದು ಆದೇಶಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa