
ಬೆಂಗಳೂರು, 10 ನವೆಂಬರ್ (ಹಿ.ಸ.) :
ಆ್ಯಂಕರ್ : ಕೋಟಿ ವೃಕ್ಷ ಅಭಿಯಾನದಡಿ ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ 1.5 ಕೋಟಿ ಸಸಿಗಳನ್ನು ನೆಡಲಾಗಿದ್ದು, 2030ರೊಳಗೆ ಒಟ್ಟು ಐದು ಕೋಟಿಯ ಗುರಿ ಸಾಧಿಸುವ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ವೃಕ್ಷಾಥಾನ್–2025ರ ಪೋಸ್ಟರ್, ಟೀಶರ್ಟ್ ಅನಾವರಣಗೊಳಿಸಿದ ಬಳಿಕ ಅವರು ಮಾತನಾಡಿ, 2016ರಲ್ಲಿ ವಿಜಯಪುರದಲ್ಲಿ ಕೇವಲ 0.17% ಹಸಿರು ಆವರಣ ಇತ್ತು. ಈಗ ಅದು 2.4%ಕ್ಕೆ ಏರಿಕೆಯಾಗಿದೆ. ಮಣ್ಣಿನ ಸಸ್ಯಪೋಷಕಾಂಶ ಹೆಚ್ಚಿದ್ದು, ಭೂಗತ ಜಲಮಟ್ಟ ಮತ್ತು ವಾರ್ಷಿಕ ಮಳೆಪಾತ (550 ಮಿಮೀ. ಇಂದ 650 ಮಿಮೀ.) ಏರಿಕೆಯಾಗಿದೆ ಎಂದರು.
ಕೃಷ್ಣ ಭಾಗ್ಯ ಜಲ ನಿಗಮದ ಸಿಎಸ್ಆರ್ ನಿಧಿಯಿಂದ ಪ್ರತಿ ವರ್ಷ 10 ಲಕ್ಷ ಸಸಿಗಳನ್ನು ಉಚಿತವಾಗಿ ರೈತರಿಗೆ ವಿತರಿಸಲಾಗುತ್ತಿದೆ. ಜಿಲ್ಲೆಯ ವಿವಿಧ ಕೆರೆಗಳ ಸುತ್ತಮುತ್ತ ಹಸಿರು ವಲಯ ನಿರ್ಮಿಸಲಾಗಿದೆ. ಭೂತನಾಳ ಹಾಗೂ ಮಮದಾಪುರ ಕೆರೆಗಳ ಸುತ್ತಲೂ ಲಕ್ಷಾಂತರ ಸಸಿಗಳನ್ನು ನೆಡುವ ಮೂಲಕ ಜೀವವೈವಿಧ್ಯತೆ ಹೆಚ್ಚಿಸಲಾಗಿದೆ ಎಂದರು.
ಈ ಅಭಿಯಾನದಲ್ಲಿ ಜನ್ಮದಿನದಂದು ಸಸಿ ನೆಡುವುದು, ರಕ್ಷಾ ಬಂಧನದಂದು ‘ವೃಕ್ಷ ಬಂಧನ’, ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಸಿಯನ್ನು ಉಡುಗೊರೆಯಾಗಿ ನೀಡುವಂತಹ ನೂತನ ಆಂದೋಲನಗಳನ್ನೂ ಕೈಗೊಳ್ಳಲಾಗಿದೆ.
ವಿಜಯಪುರದಲ್ಲಿ ವೃಕ್ಷಾಥಾನ್ ಓಟ
ಡಿಸೆಂಬರ್ 7ರಂದು ವಿಜಯಪುರದಲ್ಲಿ ನಡೆಯಲಿರುವ ಹಸಿರು ಓಟದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು, ಪೊಲೀಸ್, ಸೇನೆ ಸಿಬ್ಬಂದಿ ಹಾಗೂ 50ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಲಿವೆ. ₹10 ಲಕ್ಷ ಬಹುಮಾನ ಮೊತ್ತ ಘೋಷಿಸಲಾಗಿದೆ. ಓಟ 5 ಕಿಮೀ, 10 ಕಿಮೀ ಮತ್ತು 21 ಕಿಮೀ ವಿಭಾಗಗಳಲ್ಲಿ ನಡೆಯಲಿದೆ.
ವೃಕ್ಷಾಥಾನ್ ಮಾರ್ಗವು ಗೋಲ್ಗುಂಭಜ್, ಗಗನಮಹಲ್, ಸಿದ್ಧೇಶ್ವರ ದೇವಾಲಯ, ಇಬ್ರಾಹಿಂ ರೌಝಾ, ಬಾರಾ ಕಾಮನ್ ಮುಂತಾದ ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡಿದೆ.
“ಸ್ವಚ್ಛ, ಸುಂದರ ಮತ್ತು ಹಸಿರು ವಿಜಯಪುರಕ್ಕಾಗಿ ಓಡಿ” ಎಂಬುದು ಈ ವರ್ಷದ ವೃಕ್ಷಾಥಾನ್ ಥೀಮ್ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa