
ಬೆಂಗಳೂರು, 10 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದ ಎಲ್ಲಾ ಶಾಲೆ–ಕಾಲೇಜುಗಳಲ್ಲಿ ನವೆಂಬರ್ 11ರಂದು ಭಾರತದ ಮೊದಲ ಶಿಕ್ಷಣ ಸಚಿವ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಅಂಗವಾಗಿ ‘ರಾಷ್ಟ್ರದ ಶಿಕ್ಷಣ ದಿನಾಚರಣೆ’ ಆಯೋಜಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಶಿಕ್ಷಣ ಇಲಾಖೆಯ ಅಧಿಸೂಚನೆಯಲ್ಲಿ, “2008ರಿಂದ ಭಾರತ ಸರ್ಕಾರದ ಮಾರ್ಗದರ್ಶನದಂತೆ ಪ್ರತಿ ವರ್ಷ ನವೆಂಬರ್ 11ರಂದು ರಾಷ್ಟ್ರದ ಶಿಕ್ಷಣ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ–ಕಾಲೇಜುಗಳಲ್ಲಿ ಈ ದಿನವನ್ನು ಸಾರ್ಥಕವಾಗಿ ಆಚರಿಸಬೇಕು,” ಎಂದು ತಿಳಿಸಲಾಗಿದೆ.
ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೌಲ್ಯ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರದ ಕುರಿತು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಇಲಾಖೆ ಸೂಚಿಸಿದೆ. ಪ್ರಬಂಧ, ಚಿತ್ರಕಲೆ, ಭಾಷಣ, ಕ್ವಿಜ್ ಸ್ಪರ್ಧೆ ಹಾಗೂ ಪ್ರೇರಣಾದಾಯಕ ಉಪನ್ಯಾಸಗಳಂತಹ ಚಟುವಟಿಕೆಗಳನ್ನು ಆಯೋಜಿಸಲು ಸೂಚಿಸಲಾಗಿದೆ.
ಶಿಕ್ಷಣ ಇಲಾಖೆಯು ಸ್ಥಳೀಯ ಸಂಸ್ಥೆಗಳು, ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳು ಹಾಗೂ ಶಿಕ್ಷಕರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa