
ಮೈಸೂರು, 10 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಮಾನವ–ಹುಲಿ ಸಂಘರ್ಷದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಹುಲಿ–ಆನೆಗಳ ಚಲನೆ, ಅರಣ್ಯ ಪ್ರದೇಶದ ಪರಿಸ್ಥಿತಿ ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಗಂಭೀರ ಚರ್ಚೆ ನಡೆಯಿತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು , “ಹುಲಿ ಹಾಗೂ ಆನೆಗಳು ಅರಣ್ಯದಿಂದ ಹೊರಬರುವುದಕ್ಕೆ ವೈಜ್ಞಾನಿಕ ಕಾರಣಗಳನ್ನು ವಿಶ್ಲೇಷಿಸುವ ಅಗತ್ಯವಿದೆ. ವೈಜ್ಞಾನಿಕ ದೃಷ್ಟಿಯಿಂದ ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ತುರ್ತು ಅಗತ್ಯವಿದೆ,” ಎಂದು ಹೇಳಿದರು.
ಈ ಕುರಿತು ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು, ಕಾಡಿನಲ್ಲಿರುವ ನೀರಿನ ಗುಂಡಿಗಳನ್ನು ತುಂಬಿಸುವುದು, ಲಾಂಟೆನಾ ಗಿಡಗಳನ್ನು ತೆಗೆಯುವುದು, ಅರಣ್ಯ ಪ್ರದೇಶಗಳಲ್ಲಿ ಮೇವು ಬೆಳೆಸುವುದು, ಆನೆ ಹಾಗೂ ಹುಲಿಗಳ ಚಲನೆ ಕುರಿತು ನಿರಂತರ ನಿಗಾವಹಿಸುವ ವ್ಯವಸ್ಥೆ ಕಲ್ಪಿಸುವುದು.
ಅರಣ್ಯ ಪ್ರಾಣಿ–ಮಾನವ ಸಂಘರ್ಷ ತಪ್ಪಿಸಲು ಶೀಘ್ರದಲ್ಲೇ ಪ್ರತ್ಯೇಕ ಸಭೆ ಕರೆಯಲಾಗುತ್ತದೆ. ಪ್ರತಿ ಇಲಾಖೆ ಸಮಗ್ರ ಮಾಹಿತಿ ಹಾಗೂ ಅಧ್ಯಯನದೊಂದಿಗೆ ಪೂರ್ಣ ಸಿದ್ಧತೆಯಿಂದ ಸಭೆಗೆ ಹಾಜರಾಗಬೇಕು,” ಎಂದು ಸ್ಪಷ್ಟ ಸೂಚನೆ ನೀಡಿದರು.
ಅರಣ್ಯ–ಮಾನವ ಸಂಘರ್ಷ ಕುರಿತಂತೆ ಸಹಾಯಕ್ಕಾಗಿ ಹೆಲ್ಪ್ಲೈನ್ ಈಗಾಗಲೇ ತೆರೆಯಲಾಗಿದೆ. ಕಮಾಂಡ್ ಸೆಂಟರ್ ಸ್ಥಾಪನೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಅರಣ್ಯ ಹಕ್ಕು ಕಾಯ್ದೆಗೆ ಬಂದ 7,000 ಅರ್ಜಿಗಳಲ್ಲಿ 5,900 ತಿರಸ್ಕರಿಸಲ್ಪಟ್ಟಿರುವುದರ ಬಗ್ಗೆ ಮುಖ್ಯಮಂತ್ರಿ ಪ್ರಶ್ನೆಗೆ, ಜಿಲ್ಲಾಧಿಕಾರಿಗಳು, “ಈ ಅರ್ಜಿಗಳು 2019–20ರಿಂದ ಬಾಕಿಯಾಗಿದ್ದವು. ತಿರಸ್ಕಾರಕ್ಕೆ ಸ್ಪಷ್ಟ ಕಾರಣ ನೀಡದಿದ್ದ ಪ್ರಕರಣಗಳನ್ನು ಮರುಪರಿಶೀಲನೆಗೆ ಸ್ವೀಕರಿಸಲಾಗಿದೆ,” ಎಂದು ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa