ತುಮಕೂರು, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ನೀರಿನ ಪ್ರಮಾಣದಲ್ಲಿ ನಿನ್ನೆ ಏಕಾಏಕಿ ತೀವ್ರ ಹೆಚ್ಚಳ ಕಂಡು, ಆರು ಮಂದಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆಗೆ ಸಂಬಂಧಿಸಿದಂತೆ ಮೂವರ ಶವಗಳು ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿದೆ.
ಘಟನೆಯು ಯಡಿಯೂರು ಹೋಬಳಿ ಮಾಗಡಿಪಾಳ್ಯ ಗ್ರಾಮ ಮತ್ತು ಬಿಜಿ ಪಾಳ್ಯದ ನಿವಾಸಿಗಳ ಕುಟುಂಬಗಳು ನಿನ್ನೆ ರಜೆ ದಿನದ ಹಿನ್ನಲೆಯಲ್ಲಿ ಜಲಾಶಯಕ್ಕೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಂಭವಿಸಿದೆ. ನದಿ ತೀರದಲ್ಲಿ ಆಟವಾಡುತ್ತಿದ್ದ ಒಂಭತ್ತು ಮಂದಿಯಲ್ಲಿ ಆರು ಮಂದಿ ಜಲಾಶಯದ ಮೂಲಕ ಹರಿದ ನೀರಿನ ರಭಸಕ್ಕೆ ಕೊಚ್ಚಿ ಹೊಗಿದ್ದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ನಾಲ್ಕು ಗಂಟೆಗಳ ಶೋಧಕಾರ್ಯ ನಡೆಸಿದ್ದರು. ರಾತ್ರಿ ಕತ್ತಲೆಯಿಂದ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇಂದು ಬುಧವಾರ ಬೆಳಿಗ್ಗೆಯಿಂದ ಶೋಧಕಾರ್ಯ ಪುನರಾರಂಭವಾಗಿದ್ದು, ಈ ವೇಳೆ ಮೂವರ ಶವಗಳು ಪತ್ತೆಯಾಗಿವೆ. ಉಳಿದ ಮೂವರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ನೀರಿನಲ್ಲಿ ಕೊಚ್ಚಿಹೋದವರ ಹೆಸರುಗಳು: ಸಾಧಿಯಾ (25), ಅರ್ಬಿನ್ (20), ತಬಸ್ಸಮ್ (46), ಶಬಾನ (44), ಮೋಬ್ (1) ಮತ್ತು ನಿಪ್ರಾ (4). ಘಟನೆ ಸಂದರ್ಭದಲ್ಲಿ ಮೋಸಿನ್ ಎಂಬವರು ಈಜಿಕೊಂಡು ಬಶೀರಾ ಮತ್ತು ನವಾಜ್ ಎಂಬ ಇಬ್ಬರನ್ನು ರಕ್ಷಿಸಿದ್ದಾರೆ.
ಮಾರ್ಕೋನಹಳ್ಳಿ ಜಲಾಶಯವು ಇತ್ತೀಚೆಗೆ ಭರ್ತಿಯಾಗಿದ್ದು, ಸುಮಾರು 1200 ಕ್ಯೂಸೆಕ್ಸ್ ನೀರು ಒಳಹರಿವು ಮತ್ತು ಅದೇ ಪ್ರಮಾಣದ ಹೊರಹರಿವು ಇದೆ. ಕೋಡಿಹಳ್ಳ ಮತ್ತು ಜಲಾಶಯ ಪಾತ್ರದ ಪ್ರದೇಶಗಳಲ್ಲಿ ನೀರಿನ ಹರಿವು ಅತೀವ ವೇಗವಾಗಿದೆ. ಜಲಾಶಯ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa