ಗದಗ, 8 ಅಕ್ಟೋಬರ್ (ಹಿ.ಸ.)
ಆ್ಯಂಕರ್:
ಪತ್ನಿಯ ಮೇಲೆ ಸಂಶಯದಿಂದ ಕಿರುಕುಳ ನೀಡುತ್ತಿದ್ದ ಪತಿ, ಅಂತಿಮವಾಗಿ ಪತ್ನಿಯನ್ನೇ ಚಾಕು ಹಾಗೂ ಕಂದ್ಲಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಯಲ್ಲಮ್ಮ ಅಲಿಯಾಸ್ ಸ್ವಾತಿ ಎಂದು ಗುರುತಿಸಲಾಗಿದ್ದು, ಪತಿ ರಮೇಶ್ ನರಗುಂದ ಆರೋಪಿಯಾಗಿದ್ದಾನೆ.
ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್ ನರಗುಂದ ಕಳೆದ ಕೆಲವು ತಿಂಗಳಿನಿಂದ ಪತ್ನಿ ಮೇಲೆ ಸಂಶಯಪಟ್ಟು ತಕರಾರು ಮಾಡುತ್ತಿದ್ದನೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನೆಯ ದಿನ ಬೆಳಗ್ಗೆ ಪತ್ನಿಯೊಂದಿಗೆ ವಾಗ್ವಾದ ನಡೆದಿದ್ದು, ಕೋಪದ ಹೊತ್ತಿನಲ್ಲಿ ಮೊದಲು ಕಲ್ಲು ಎತ್ತಿ ಹಾಕಿ, ಬಳಿಕ ಕಂದ್ಲಿ ಹಾಗೂ ಚಾಕುವಿನಿಂದ ಇರಿದು ಕೊಲೆಮಾಡಿದ್ದಾನೆ. ನಂತರ ರಕ್ತಸಿಕ್ತ ಪತ್ನಿಯ ಶವದ ಬಳಿಯೇ ಚಾಕು ಹಿಡಿದು ಮನೆ ಮುಂದೆ ನಿಂತು “ಯಾರಾದರೂ ಹತ್ತಿರ ಬಂದ್ರೆ ಚುಚ್ಚುತ್ತೇನೆ” ಎಂದು ಬೆದರಿಸಿದ್ದಾನೆ.
ಈ ದೃಶ್ಯ ನೋಡಿ ಸ್ಥಳೀಯರು ಹಾಗೂ ಪೊಲೀಸರು ದಂಗಾಗಿದ್ದು, ಗದಗ ಗ್ರಾಮೀಣ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಎಸ್ಪಿ ರೋಹನ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂರು ಮಕ್ಕಳ ತಂದೆಯಾಗಿರುವ ರಮೇಶ್ ನರಗುಂದ ತನ್ನ ಪತ್ನಿಯ ಮೇಲಿನ ಅತಿಯಾದ ಸಂಶಯದಿಂದ ಇಂಥ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಘಟನೆಯಿಂದ ಗ್ರಾಮದಲ್ಲಿ ದುಃಖದ ವಾತಾವರಣ ಆವರಿಸಿದೆ. ಗದಗ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP