ಕೊಪ್ಪಳ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯ ಅಸುರಕ್ಷಿತ ರಸ್ತೆ ಕ್ರಾಸ್ಗಳಲ್ಲಿ ಫ್ಲೈಓರ್ ನಿರ್ಮಾಣ ಮತ್ತು ವಾಹನಗಳ ಸಂಚಾರದ ಮೇಲೆ ನಿಗಾವಹಿಸಲು ಅಪಘಾತ ವಲಯಗಳಲ್ಲಿ ಸಿಸಿ ಟಿವಿ ಅಳವಡಿಸಿ ರಸ್ತೆ ಅಪಘಾತಗಳನ್ನು ಶೂನ್ಯಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದ್ದಾರೆ.
ಅವರು ಶುಕ್ರವಾರ ಕೊಪ್ಪಳ ತಾಲ್ಲೂಕಿನ ಹೊಸಳ್ಳಿ ಮತ್ತು ಹಿಟ್ನಾಳ್ ಮಧ್ಯ ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50ರ ಮೇಲ್ಸೇತುವೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಎನ್.ಹೆಚ್-50 ಮತ್ತು 63 ರಸ್ತೆಗಳಲ್ಲಿ ಬಹಳಷ್ಟು ವಾಹನಗಳ ಸಂಚಾರ ದಟ್ಟನೆ ಹೆಚ್ಚಾಗಿದೆ. ಈ ಎರಡು ರಸ್ತೆಗಳ ಮಧ್ಯದಲ್ಲಿ ಸುಮಾರು 15 ಕಿಮೀ ಈ ಮಾರ್ಗದಲ್ಲಿ ಒಂದು ವರ್ಷಕ್ಕೆ ಸುಮಾರು 190 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 50 ರಿಂದ 60 ಜನ ಸಾವನ್ನಪ್ಪುತ್ತಿದ್ದರು. ಇದನ್ನು ಅರಿತ ಹಿಂದಿನ ಸಂಸದರಾದ ಕರಡಿ ಸಂಗಣ್ಣನವರು 120 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿ, ನಿಂಗಾಪುರ, ಹೊಸಳ್ಳಿ, ಶಹಪುರ ಹಾಗೂ ಮೆಥಗಲ್ ಸೇರಿ ಒಟ್ಟು ಐದು ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಟೆಂಡರ್ ಕರೆದು ಅಡಿಗಲ್ಲು ಹಾಕಿದ್ದರು. ಅವುಗಳನ್ನು ಒಂದೊಂದಾಗಿ ಪೂರ್ಣಗೊಳಿಸಲಾಗುವುದು. ರಸ್ತೆ ಅಪಘಾತಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆಯಾಗಿಸಲು ಹೊಸ ಸಕ್ಯೂರಿಟಿ ಸಿಸ್ಟಮ್ ಮಾಡಬೇಕೆಂದು ಸಿಸಿ ಟಿವಿ ಅಳವಡಿಸಲಾಗಿದೆ ಎಂದರು.
ವಾಹನಗಳಿಗೆ ವೇಗತ ಮಿತಿ ನಿಗದಿಪಡಿಸಿ ಭಾರಿ ವಾಹನಗಳಿಗೆ ವೇಗ ಮಿತಿ 60 ಕಿಮೀ ಹಾಗೂ ಕಾರ್ ಮತ್ತು ಬಸ್ಗಳಿಗೆ 70 ಕಿಮೀ ಮಿತಿ ನಿಗದಿ ಮಾಡಿ, ಓವರ್ ಸ್ಪೀಡ್ನಲ್ಲಿ ಹೋಗುವಂತಹ ವಾಹನಗಳಿಗೆ ಹೊಸ ಟೆಕ್ನಾಲಜಿ ಪ್ರಕಾರ ವಾಹನಗಳ ನಂಬರ್ ಮೇಲೆಯೇ ತ್ವರಿತವಾಗಿ ದಂಡ ಹಾಕುವ ಕೆಲಸ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ, ಈ ನಿಯಮಗಳನ್ನು ಜಾರಿಗೊಳಿಸಲಾಗುವುದು.
ಟಿಪ್ಪರ ವಾಹನವೊಂದರ ಓವರ್ ಸ್ಪೀಡ್ನಿಂದಾಗಿ ಇತ್ತೀಚೆಗೆ ಕಿರ್ಲೋಸ್ಕರ್ ಕಂಪನಿ ಹತ್ತಿರ 129 ಕುರಿಗಳು ಸಾವನಪ್ಪಿದ್ದವು. ಕಿರ್ಲೋಸ್ಕರ್ ಮತ್ತು ಹೊಸಪೇಟೆ ಸ್ಟೀಲ್ಸ್ ಕಂಪನಿ ಹತ್ತಿರವೂ ಸಿಸಿ ಟಿವಿ ಅಳವಡಿಸಲು ಆಯಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಈ ರಸ್ತೆಯಲ್ಲಿ ಅಪಘಾತಗಳನ್ನು ಶೂನ್ಯಕ್ಕೆ ತರುವ ಉದ್ದೇಶ ಹೊಂದಲಾಗಿದೆ. ಹೊಸಳ್ಳಿ ಮತ್ತು ಹಿಟ್ನಾಳ್ ಮಧ್ಯ ಭಾಗದ ಎನ್.ಹೆಚ್-50ರ ಮೇಲ್ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 19.43 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರ ಬಳಕೆಗೆ ಇಂದು ಅನುವು ಮಾಡಿಕೊಡಲಾಗಿದೆ. ಈ ಮೇಲ್ಸೇತುವೆಯಲ್ಲಿ ಶೀಘ್ರದಲ್ಲಿಯೇ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ವಾಹನಗಳ ಸಂಚಾರಕ್ಕೆ ಅನುಕೂಲ ಮತ್ತು ಅಪಘಾತಗಳನ್ನು ತಡೆಗಟ್ಟಲು ಹೊಸಳ್ಳಿ-ಹಿಟ್ನಾಳ್ ಮಧ್ಯ ಭಾಗದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮೇಲ್ಸೇತುವೆ ನಿರ್ಮಾಣವಾಗಿರುವುದು ಸಂತಸ ತಂದಿದೆ. ಈ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಿರುವುದು ಸಾರ್ವಜನಿಕರಿಗೆ ಮತ್ತು ವಾಹನಗಳ ಓಡಾಟಕ್ಕೆ ತುಂಬಾ ಅನುಕೂಲವಾಗಿದೆ.
ಇದೇ ಅಕ್ಟೋಬರ್ 6 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯಲಿದ್ದು, ಸುಮಾರು 1500 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯಲಿದೆ. ಈ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳು, ಸಚಿವರುಗಳು ಮತ್ತು ಇತರೆ ಗಣ್ಯರು ಪಾಲ್ಗೊಳ್ಳಲಿದ್ದು, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಕರೆತರಬೇಕು ಮತ್ತು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕು ಎಂದರು.
ಮಾಜಿ ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ಹೊಸಳ್ಳಿ ಮತ್ತು ಹಿಟ್ನಾಳ್ ಮಧ್ಯ ಭಾಗದ ರಾಷ್ಟ್ರೀಯ ಹೆದ್ದಾರಿ-50ರ ಮೇಲ್ಸೇತುವೆ ನಿರ್ಮಿಸಲು ಮಂಜೂರಾತಿಗೆ ಈ ಹಿಂದೆ ಶ್ರಮಿಸಿದ್ದೇನೆ. ಈ ಕಾಮಗಾರಿಯ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಿ, ಬೇಗನೇ ರಸ್ತೆ ಮೇಲ್ಸೇತುವೆ ನಿರ್ಮಾಣ ಮಾಡಿರುವುದಕ್ಕೆ ಇಂದಿನ ಸಂಸದರಿಗೆ ಮತ್ತು ಗುತ್ತಿಗೆದಾರರಿಗೆ ಅಭಿನಂದಿಸುತ್ತೇನೆ. ಕುಕನೂರು, ಯಲಬುರ್ಗಾ, ಮಸ್ಕಿ ಮತ್ತು ಸಿಂಧನೂರು ಬೈಪಾಸ್ ಕಾಮಗಾರಿಯನ್ನು ಪ್ರಾರಂಭಿಸಬೇಕು. ಕೊಪ್ಪಳದಲ್ಲಿ ಏರ್ಪೋಟ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ರೈಲ್ವೆ ಯೋಜನೆಗಳಿಗೆ ಆದ್ಯತೆ ನೀಡಿ, ದರೋಜಿ-ಗಂಗಾವತಿ ಮತ್ತು ಗಂಗಾವತಿ-ಬಾಗಲಕೋಟ ರೈಲ್ವೆ ಲೈನ್ ಪ್ರಾರಂಭಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್, ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಕೊಪ್ಪಳ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಾಲಚಂದ್ರನ್, ಮುಖಂಡರಾದ ಗೂಳಪ್ಪ ಹಲಗೇರಿ, ವೀನಗೌಡ ಪಾಟೀಲ್, ಯಂಕಪ್ಪ, ಕೆ.ಎಂ.ಸೈಯದ್, ವಿಶ್ವನಾಥ ರಾಜಣ್ಣ, ಗುತ್ತಿಗೆದಾರ ಶರಣಬಸವರಾಜ ಆಲೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್