ರಾಯಚೂರು, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಿರಂತರ ಭಾರಿ ಮಳೆಯಿಂದಾಗಿ ಹಾನಿಯಾದ ಬೆಳೆಗಳ ಕುರಿತು ಈಗಾಗಲೆ ಸಮೀಕ್ಷೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಅಧಿಕಾರಿಗಳು ಬೆಳೆ ನಷ್ಟದ ಕುರಿತು ವರದಿಯನ್ನು ಸಿದ್ದಪಡಿಸಲಿದ್ದಾರೆ. ಆ ವರದಿಯನುಸಾರ ಸರ್ಕಾರ ಪರಿಹಾರ ನೀಡಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು.
ಸಿರವಾರ ತಾಲೂಕಿನ ನವಲಕಲ್, ಕುರಕುಂದಾ ವಡವಾಟಿ ಸೀಮಾಂತರದಲ್ಲಿ ಬೇಳೆದ ಹತ್ತಿ ಬೇಳೆಗಳನ್ನು ಹಾನಿಯನ್ನು ಪರಿಶೀಲಿಸಿ ಜಮೀನಿನಲ್ಲಿದ್ದ ರೈತರೊಂದಿಗೆ ಮಾತನಾಡಿ ಮಾಹಿತಿ ಪಡೆದರು.
ಹಾನಿಗೊಳಗಾದ ರೈತರಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಬೆಳೆಹಾನಿ ಸಮೀಕ್ಷೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಅಧಿಕಾರಿಗಳು ನಿಮ್ಮ ನಿಮ್ಮ ಗ್ರಾಮಗಳಿಗೆ ಹಾಗೂ ಬೆಳೆಗಳು ಬೆಳೆದ ಜಮೀನುಗಳಿಗೆ ಬಂದು ಬೆಳೆ ಹಾನಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಅಧಿಕಾರಿಗಳಿಗೆ ಬೆಳೆ ಹಾನಿಯ ಬಗ್ಗೆ ನಿರ್ಧಿಷ್ಟ ಮಾಹಿತಿ ನೀಡಬೇಕೆಂದು ರೈತರಿಗೆ ತಿಳಿಸಿದರು.
ನಂತರ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ರೈತ ಮಹಿಳೆಯರು ಸಚಿವರೊಂದಿಗೆ ಮಾತನಾಡಿ, ಏನ್ಮಾಡಮ್ರಿ ಯಪ್ಪಾ ಎಣ್ಣಿ, ಗೊಬ್ರ ಹಾಕಿ ಹತ್ತಿ ಬೆಳಸಿದ್ವಿ ಇನ್ನೇನು ಹತ್ತಿ ಬೆಳೆ ಕೈಗೆ ಬಂದಿತ್ತು, ಬಿಡಿಸುವಷ್ಠರಲ್ಲಿ ವಾರಾನುಗಟ್ಟಲೆ ಮಳೆ ಬಂದು ಹತ್ತಿ ಎಲ್ಲ ನೀರ ಪಾಲಾಗ್ಯಾದ, ಏನರ ಪರಿಹಾರ ಕೊಡಸ್ರಿ ಎಪ್ಪಾ ಎಂದು ಮನವಿ ಮಾಡಿಕೊಂಡರು.
ರೈತರಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಸರ್ಕಾರ ನಿಮ್ಮ ಜೊತೆಗಿದೆ ಈಗ ಮಳೆಹಾನಿಯ ಕುರಿತು ಅಧಿಕಾರಿಗಳೊಂದಿಗೆ ಸಭೆಯಿದೆ. ಶೀಘ್ರ ಸಮೀಕ್ಷೆ ಮಾಡುವ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಬೆಳೆ ನಷ್ಟ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ, ಹಾನಿಯಾದ ಬೆಳೆಗೆ ನ್ಯಾಯಯುತವಾಗಿ ಪರಿಹಾರ ಸಿಗುವ ಹಾಗೆ ಅಧಿಕಾರಿಗಳು ಸಮೀಕ್ಷೆ ನಡೆಸಬೇಕು. ಹತ್ತಿ, ಭತ್ತ, ತೊಗರಿ, ಜೋಳ ಸೇರಿದಂತೆ ಈಗ ಬಿತ್ತನೆಯಾದ ಎಲ್ಲ ಬೆಳೆಗಳ ಹಾನಿಯ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಚುಕ್ಕಿ ಸೂಗಪ್ಪ, ಶರಣಯ್ಯ ನಾಯಕ್, ಕೆ ಶಾಂತಪ್ಪ, ಮೌನೇಶ್ ಹೀರಾ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ್, ಚುಕ್ಕಿ ಶಿವಕುಮಾರ, ನಾಗಪ್ಪ ನವಲಕಲ್, ದೇವೆಂದ್ರಪ್ಪ, ಮಲ್ಲಿಕಾರ್ಜುನ್ ಮಲ್ಲಟ, ಶಿವಪ್ಪ ಗೊಲ್ಲದಿನ್ನಿ, ಮಲ್ಲಪ್ಪ ನವಲಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್