ಕೋಲಾರ, ೧೧ ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜ್ಯೋತಿ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಎಸ್ಜಿಇಸಿಟಿ ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪಿಸಿದ್ದು, ಸಮುದಾಯದ ನಿರುದ್ಯೋಗಿ ಯುವಕರು ಕೋರ್ಸುಗಳಿಗೆ ದಾಖಲಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದು ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಶ್ವಾಸ್ಕುಮಾರ್ ದಾಸ್ ಕರೆ ನೀಡಿದರು.
ಗಾಣಿಗ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಬೆಂಗಳೂರು ಹಾಗೂ ಜ್ಯೋತಿ ಎಜುಕೇಷನಲ್ ಟ್ರಸ್ಟ್ ಕೋಲಾರ ಇವರ ಸಹಯೋಗದೊಂದಿಗೆ ನಗರದ ಜ್ಯೋತಿ ಎಜುಕೇಷನಲ್ ಟ್ರಸ್ಟ್ನ ಕ್ಯಾಂಪಸ್ನಲ್ಲಿ ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರದ ಶಾಖೆ ಹಾಗೂ ಎಸ್ಜಿಇಸಿಟಿ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬೆಂಗಳೂರಿನ ಗಾಣಿಗ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ನ ನಾಗರಾಜಶೆಟ್ಟಿ ಅವರು ಇಂತಹ ಸಮುದಾಯಕ್ಕೆ ನೆರವಾಗುವ ಕೆಲಸಗಳನ್ನು ಹಲವಾರು ವರ್ಷಗಳ ಹಿಂದಿನಿಂದಲೇ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದ ಅವರು, ಬಡವರ ಮಕ್ಕಳ ಶಿಕ್ಷಣಕ್ಕು ನೆರವಾಗುವ ಅವರ ಪ್ರಯತ್ನ ಶ್ಲಾಘನೀಯ ಎಂದರು.
ಮಾಜಿ ಸಭಾಪತಿ ಸುದರ್ಶನ್ ಅವರ ಪ್ರಯತ್ನ, ಹಿಂದುಳಿದ ವರ್ಗಗಳ ಮೇಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿಯಿಂದಾಗಿ ಗಾಣಿಕ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದೆ, ಇದರಡಿ ಸಮುದಾಯಕ್ಕೆ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಬದ್ದತೆಯಿಂದ ತಲುಪಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಗಾಣಿಗ ಸಮುದಾಯಕ್ಕೆ ಪರೋಪಕಾರಿ ದೊಡ್ಡಣ್ಣಶೆಟ್ಟರು ಆದರ್ಶವಾಗಿದ್ದಾರೆ, ಮಹಾರಾಜರೇ ಅವರಿಗೆ ಬಿರುದು ನೀಡುತ್ತಾರೆಂದರೆ ಅಂತಹ ಮಹನೀಯರ ಸಾಧನೆ ಅಷ್ಟಿಷ್ಟಲ್ಲ, ತಮ್ಮ ನೂರಾರು ಕೋಟಿ ರೂ ಮೌಲ್ಯದ ಆಸ್ತಿಯನ್ನು ಸಮುದಾಯಕ್ಕಾಗಿ ನೀಡಿದ ಅವರೇ ನಮಗೆಲ್ಲಾ ಆದರ್ಶ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಗಾಣಿಗ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ನಾಗರಾಜಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡುತ್ತಿದೆ, ಅನಾಥ ಮಕ್ಕಳಿಗೆ ಶೈಕ್ಷಣಿಕ ಶುಲ್ಕ ವಿನಾಯತಿ, ಮರುಪಾವತಿ ಮೂಲಕ ನೆರವಾಗುತ್ತಾ ಬಂದಿದೆ ಎಂದರು.
ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಆರಂಭಿಸಲು ಜ್ಯೋತಿ ಎಜುಕೇಷನಲ್ ಟ್ರಸ್ಟ್ ಅವಕಾಶ ಕಲ್ಪಿಸಿದ್ದು, ರಾಜ್ಯದಲ್ಲೇ ಇಲ್ಲಿ ಮೊದಲ ಬಾರಿಗೆ ಪೈಲೆಟ್ ಪ್ರಾಜೆಕ್ಟ್ ಆಗಿ ಆರಂಭಿಸಿದ್ದು, ನಂತರ ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವುದಾಗಿ ತಿಳಿಸಿ, ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಸಾಲ ಸೌಲಭ್ಯವೂ ಕೊಡಿಸುವುದಾಗಿ ತಿಳಿಸಿದರು.
ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರದ ಶಾಖೆಯನ್ನು ಇಂದೇ ಆರಂಭಿಸಿದ್ದು, ಮೊದಲ ದಿನವೇ ೫ ಮಂದಿ ದಾಖಲಾಗಿದ್ದಾರೆ ಇದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಪ್ರಾಥಮಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಬಿ.ಕೆ.ಬಸವರಾಜು ಮಾತನಾಡಿ, ಶಿಕ್ಷಣ ಮಾತ್ರ ನಮ್ಮನ್ನು ಮುಳುಗಿಸದೇ ಜೀವನದ ದಡ ಸೇರಿಸುತ್ತದೆ ಎಂಬ ಸತ್ಯ ಅರಿಯಿರಿ, ಶಿಕ್ಷಣದೊಂದಿಗೆ ಇಂದು ಕೌಶಲ್ಯವನ್ನು ಗಳಿಸಿದರೆ ಬದುಕು ಸುಖಕರವಾಗಿರುತ್ತದೆ ಎಂದು ತಿಳಿಸಿ, ಸ್ವಾವಲಂಬಿ ಜೀವನಕ್ಕೆ ಈ ಕೇಂದ್ರದ ಪ್ರಯೋಜನ ಪಡೆಯಲು ಸಲಹೆ ನೀಡಿದರು.
ರಾಜ್ಯ ಗಾಣಿಗ ಸಂಘದ ಅಧ್ಯಕ್ಷ ಎಂ.ಆರ್.ರಾಜಶೇಖರ್, ವಿದ್ಯೆ ಜತೆಗೆ ಕುಲಕಸುಬು ಉಳಿಸಿಕೊಂಡು ಹೋಗಬೇಕು ಆಗ ಮಾತ್ರ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ತಿಳಿಸಿ, ಗಾಣಿಗ ಅಭಿವೃದ್ದಿ ನಿಗಮ, ಟ್ರಸ್ಟ್, ಸಂಘ ಜತೆಗೂಡಿ ಸಮುದಾಯದ ಹಿತ ಕಾಯಲಿದೆ ಎಂದು ತಿಳಿಸಿದರು.
ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರದ ಶಾಖೆ ಹಾಗೂ ಎಸ್ಜಿಇಸಿಟಿ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಉದ್ಘಾಟಿಸಿದರು.
ಜ್ಯೋತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ನಾಗನಾಳ ಮಂಜುನಾಥ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್, ಪ್ರಗತಿಪರ ರೈತರ ಎಂ.ಆರ್.ನಾರಾಯಣ್, ಸಂಘದ ಟಿ.ವಿ.ರಾಮಕೃಷ್ಣ, ರಾಜ್ಯ ಪ್ರಶಸ್ತಿ ಪುರಸ್ಕಥ
ಪ್ರಗತಿಪರ ರೈತ ಕುರುಟಹಳ್ಳಿ ರಾಧಾಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಎಎಸ್ಐ ನಾಗರಾಜ್,ರಘು,ಟ್ರಸ್ಟ್ ವ್ಯವಸ್ಥಾಪಕ ಸುನಿಲ್ ಸಂದೀಪ್, ಎಸ್ಜಿಇಸಿಟಿ ಕಾರ್ಯದರ್ಶಿ ಕೆ.ಎನ್.ರಾಮಚಂದ್ರಪ್ಪ, ಮಹಿಳಾ ಅಧ್ಯಕ್ಷೆ ಎಂ.ಎಸ್.ಅನುರಾಧಕೃಷ್ಣಪ್ಪ, ಜಂಟಿ ಕಾರ್ಯದರ್ಶಿಗಳಾದ ಎಸ್.ಕೆ.ವೆಂಕಟರಾಮ್, ಹೆಚ್.ಸಿ.ಆಂಜಿನಪ್ಪ, ರಂಗಸ್ವಾಮಿ, ನಾರಾಯಣಪ್ಪ ಮತ್ತಿತರರಿದ್ದರು.
ಚಿತ್ರ : ಕೋಲಾರದ ಜ್ಯೋತಿ ಎಜುಕೇಷನಲ್ ಟ್ರಸ್ಟ್ನ ಕ್ಯಾಂಪಸ್ನಲ್ಲಿ ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರದ ಶಾಖೆ ಹಾಗೂ ಎಸ್ಜಿಇಸಿಟಿ ಕೌಶಲ್ಯಾಭಿವೃದ್ದಿ ಕೇಂದ್ರಕ್ಕೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್,ರಾಜ್ಯ ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಶ್ವಾಸ್ಕುಮಾರ್ ದಾಸ್ ಚಾಲನೆ ನೀಡಿ ಮಾತನಾಡಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್