ಗದಗ, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಮ್ಮ ಜಿಲ್ಲೆಯನ್ನು ನಶಾಮುಕ್ತ ಗದಗ ಜಿಲ್ಲೆಯನ್ನಾಗಿ ಮಾಡಲು ನಾವೆಲ್ಲ ಪಣ ತೊಡಬೇಕಿದೆ. ರಾಜ್ಯಾದ್ಯಂತ ನಶಾಮುಕ್ತ ಕ್ಯಾಂಪಸ್ ನಿರ್ಮಿಸುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಯತ್ನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕಾನೂನು ಹಾಗೂ ಸಂಸದಿಯ ವ್ಯವಹಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ್ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಅದರ ಅಂಗ ಸಂಸ್ಥೆಗಳಾದ ಗದಗ ಜಿಲ್ಲೆಯ ಮೆಡಿಕಲ್, ಫಾರ್ಮಸಿ, ನರ್ಸಿಂಗ್, ಆಯುರ್ವೇದ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಗಾಂಗದಾನ ಮತ್ತು ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೇ 10ರಷ್ಟು ಯುವ ಜನಾಂಗ ನಶೆಯ ಕಪಿಮುಷ್ಟಿಯಲ್ಲಿ ಸಿಲುಕಿರುವುದು ಕಳವಳಕಾರಿ. ಇದು ಒಬ್ಬ ವಿದ್ಯಾರ್ಥಿಯನ್ನು ಮಾತ್ರವಲ್ಲ, ಅವನ ಕುಟುಂಬ, ಸಮಾಜ ಹಾಗೂ ಇಡೀ ದೇಶವನ್ನೇ ಸಂಕಷ್ಟಕ್ಕೆ ದೂಡುವಂತಹ ಸಂಗತಿ. ಶಿಕ್ಷಣ ಸಂಸ್ಥೆಗಳು, ಕುಟುಂಬಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದರ ವಿರುದ್ಧ ಹೋರಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದು ಇಲ್ಲಿ ನೆರೆದಿರುವಂತಹ ಎಲ್ಲ ವಿದ್ಯಾರ್ಥಿಗಳು, ಯುವ ಜನರು, ಪೋಷಕರು ಹಾಗೂ ಅಧ್ಯಾಪಕ ವರ್ಗದವರು ‘ನಾನು ನಶೆಯ ಗುಲಾಮನಾಗುವುದಿಲ್ಲ’ ಎಂದು ಪ್ರತಿಜ್ಞೆ ಕೈಗೊಳ್ಳಬೇಕು. ಹಾಗೆಯೇ ಸ್ನೇಹಿತರನ್ನು, ಬಂಧುಗಳನ್ನು ನಶೆಯ ಜಗತ್ತಿಗೆ ಪ್ರವೇಶಿಸದಂತೆ ತಡೆಯಬೇಕು. ದುಶ್ಚಟಗಳ ಬಳಿ ಸಾರದಂತೆ ಸ್ನೇಹಿತರನ್ನು ತಡೆಯುವುದು ಅಥವಾ ದುಶ್ಚಟಗಳಿಂದ ಅವರನ್ನು ಮುಕ್ತಗೊಳಿಸುವುದು ಸ್ನೇಹಿತರಿಗೆ ನೀವು ಕೊಡುವ ಬಹುದೊಡ್ಡ ಉಡುಗೊರೆ ಎಂದು ಕಿವಿಮಾತು ಹೇಳಿದರು.
ಅಂಗಾಂಗ ದಾನ : ಗದಗ ಜಿಲ್ಲೆಗೆ 4ನೇ ಸ್ಥಾನ
ಅಂಗಾಂಗ ದಾನದಲ್ಲಿ ಗದಗ ಜಿಲ್ಲೆ 4ನೇ ಸ್ಥಾನದಲ್ಲಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. 20ನೇ ಸ್ಥಾನದಲ್ಲಿದ್ದ ಗದಗ 4ನೇ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರ ಒಟ್ಟು ಪ್ರಯತ್ನ ಕಾರಣವಾಗಿದೆ. ಅಂಗಾಂಗ ದಾನದ ಬಗ್ಗೆ ಗದಗ ಜಿಲ್ಲೆಯಲ್ಲಿ ಚಳುವಳಿಯ ರೂಪದ ಜಾಗೃತಿಯನ್ನು ಮೂಡಿಸಿದ ಕೀರ್ತಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಕುಲಪತಿಗಳಾದ ಡಾ. ಬಿ.ಸಿ. ಭಗವಾನ್ ಅವರಿಗೆ ಗದಗಿನ ಮೇಲೆ ಹೆಚ್ಚು ಪ್ರೀತಿ. ಗದಗ ಜಿಲ್ಲೆಯನ್ನು ಸಹಕಾರಿ ಕ್ಷೇತ್ರದ ತೊಟ್ಟಿಲು ಎಂದು ಕರೆಯುತ್ತೇವೆ. ಗದಗ ಜಿಲ್ಲೆಗೂ ಸಹಕಾರಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಗದಗ ಜಿಲ್ಲೆಯ ಸಹಕಾರ ಕ್ಷೇತ್ರದ ಚಳುವಳಿಯಲ್ಲಿ ನಮ್ಮ ತಂದೆ ಕೆ.ಎಚ್. ಪಾಟೀಲ್ ಹಾಗೂ ಬಿ.ಎಸ್. ವಿಶ್ವನಾಥ್ ಅವರ ಹೆಸರು ಮುಂಚೂಣಿಯಲ್ಲಿವೆ. ಕುಲಪತಿಗಳಾದ ಬಿ.ಸಿ. ಭಗವಾನ್ ಅವರು ವಿ.ಎಸ್. ವಿಶ್ವನಾಥ್ ಅವರ ಅಳಿಯ. ಈ ನಂಟೇ ಅವರನ್ನು ಗದಗ ಜಿಲ್ಲೆಯ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಸಿ.ಭಗವಾನ್ ಮಾತನಾಡಿ, ‘ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಆದ್ಯತೆಯಾಗಬೇಕು. ಆರೋಗ್ಯವಂತ ಯುವಕರು ಮಾತ್ರ ಸ್ವಸ್ಥ ಸಮಾಜವನ್ನು ಕಟ್ಟಬಲ್ಲರು. ಹೀಗಾಗಿ ಯುವಕರನ್ನು ಆರೋಗ್ಯಪೂರ್ಣ ಜೀವನದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.
ವಿದ್ಯಾರ್ಥಿಗಳನ್ನು ಹಾಗೂ ವೈದ್ಯಕೀಯ ವೃತ್ತಿಪರರನ್ನು ಗಮನದಲ್ಲಿ ಇಟ್ಟುಕೊಂಡು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯವು ನಶಾಮುಕ್ತ ಭಾರತ ಹಾಗೂ ಅಂಗಾಂಗ ದಾನ ಸೇರಿದಂತೆ ಹಲವಾರು ಅಭಿಯಾನಗಳನ್ನು ರಾಜ್ಯವ್ಯಾಪಿಯಾಗಿ ಹಮ್ಮಿಕೊಳ್ಳಲು ಮುಂದಾಗಿದೆ. ಈ ಪ್ರಯತ್ನವನ್ನು ಗದಗ ಜಿಲ್ಲೆಯಿಂದ ಆರಂಭಿಸುತ್ತಿರುವುದು ಸಂತಸ ತಂದಿದೆ ಎಂದರು.
ದೇಶದ ಭವಿಷ್ಯವನ್ನು ನಿರ್ಧರಿಸುವ ಯುವಕರನ್ನು ನಶೆಯ ಹಿಡಿತದಿಂದ ಆಚೆ ತಂದರೆ ದೇಶದ ಅಭಿವೃದ್ಧಿ ನಿಶ್ಚಯವಾಗಿ ಆಗುತ್ತದೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯವು ನಶಾಮುಕ್ತ ಕ್ಯಾಂಪಸ್ ನಿರ್ಮಿಸುವ ಧ್ಯೇಯೋದ್ದೇಶವನ್ನು ಹೊಂದಿದೆ ಎಂದರು.
ದೇಶದಲ್ಲಿ ಕಳೆದ ವರ್ಷ ಸುಮಾರು 17ರಿಂದ 18 ಸಾವಿರ ಅಂಗಾಂಗ ಕಸಿ ಮಾಡಲಾಗಿದೆ. ಆದರೆ, ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆ 2ಲಕ್ಷಕ್ಕೂ ಅಧಿಕ. ಹೆಚ್ಚು ಹೆಚ್ಚು ಜನರು ಅಂಗಾಂಗ ದಾನ ಮಾಡಲು ಮುಂದೆ ಬರಬೇಕು. ಅದಕ್ಕೆ ನಾವು ಪ್ರೇರಣೆಯಾಗಬೇಕು ಎನ್ನುವುದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶಯವಾಗಿದೆ. ಎಲ್ಲರೂ ಈ ಬಗ್ಗೆ ಮಾಹಿತಿ ತಿಳಿದುಕೊಂಡು, ತಮ್ಮವರಲ್ಲಿಯೂ ಜಾಗೃತಿ ಮೂಡಿಸಬೇಕು. ಸ್ನೇಹಿತರು, ಬಂಧುಗಳು, ಕುಟುಂಬ ಹಾಗೂ ಪರಿಚಿತರನ್ನು ಅಂಗಾಂಗ ದಾನಕ್ಕೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಹಾಲ್ಟ್ ಸಾಲ್ಟ್ ಅಭಿಯಾನ
ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಉಪ್ಪಿನ ಸೇವನೆಗೆ ಕಡಿವಾಣ ಹಾಕಲು ’ಹಾಲ್ಟ್ ಸಾಲ್ಟ್’ ಅಭಿಯಾನವನ್ನು ಕೈಗೊಳ್ಳಲಾಗಿದೆ. ಉಪ್ಪಿನ ಬಳಕೆಯನ್ನು ಕಡಿಮೆ ಮಾಡಲು ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ನಾವು ಪ್ರತಿದಿನ ಶೇ 5ರಷ್ಟು ಉಪ್ಪನ್ನು ಬಳಸಬೇಕು ಎನ್ನುವ ಎಚ್ಚರಿಕೆಯನ್ನು ಮೀರಿ ಶೇ 20ರಿಂದ 30ರಷ್ಟು ಹೆಚ್ಚು ಪ್ರಮಾಣದ ಉಪ್ಪನ್ನು ಆಹಾರದಲ್ಲಿ ಬಳಸುತ್ತೇವೆ. ಇದರಿಂದ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಯುವಸಮುದಾಯದಲ್ಲಿ ಬ್ರೇನ್ ಸ್ಟ್ರೋಕ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಅಧಿಕರಕ್ತದೊತ್ತಡದಂತಹ ಜೀವನ ಶೈಲಿ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಮಾಹಿತಿ ನೀಡಿದರು.
ಕೆ.ಎಚ್.ಪಾಟೀಲ ಕ್ರೀಡಾಂಗಣದಿಂದ ಆರಂಭವಾದ ವಾಕ್ ಥಾನ್ ಗಾಂಧಿ ಸರ್ಕಲ್ ಮೂಲಕ ಹಳೇ ಡಿ.ಸಿ ಕಚೇರಿ ಸರ್ಕಲ್ ವರೆಗೆ ಸಾಗಿತು.
ವಿಧಾನ ಪರಿಷತ್ ಸದಸ್ಯರಾದ ಎಸ್. ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಕೆ.ಎಚ್. ಪಾಟೀಲ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಎಚ್. ಕೆ. ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಎಲ್. ಬುರಬುರೆ ,ಗದಗ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ಎಸ್. ಎಸ್. ನೀಲಗುಂದ , ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಕಿರಣ ಕುಳಗೇರಿ, ಡಾ. ಜೀವನ್ನವರ್, ಸೆನೆಟ್ ಸದಸ್ಯರಾದ ಡಾ. ವಿರೇಶ ಹಂಚಿನಾಳ, ಡಾ. ಜಗದೀಶ ಕೋನರೆಡ್ಡಿ, ಡಾ. ಸಂಕನಗೌಡ ಪಾಟೀಲ್, ಡಾ. ಸಂತೋಷ ಇಂಡಿ ಹಾಜರಿದ್ದರು. ಗದಗ ಜಿಲ್ಲೆಯ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು, ಅದ್ಯಾಪಕರು ಹಾಗೂ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP