
ಬೆಂಗಳೂರು, 24 ಮೇ (ಹಿ.ಸ.) :
ಆ್ಯಂಕರ್ : ಹಾಲುಮತ ಉದ್ಯಮಿಗಳ ಸಂಘದ ವತಿಯಿಂದ “ಕನಕೋದ್ಯಮಿಗಳ ಸಮ್ಮಿಲನ ಮತ್ತು ಉದ್ಯಮಶೀಲತಾ ಅವಕಾಶಗಳ ಅರಿವು” ಕಾರ್ಯಕ್ರಮವು ಭಾನುವಾರ ಬೆಂಗಳೂರಿನ ಜ್ಞಾನಗಂಗಾ ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಶ್ರೀ ಕನಕದಾಸ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಹಾಗೂ ರಾಮೊಹಳ್ಳಿ ರಾಮಕೃಷ್ಣಾಶ್ರಮದ ಶ್ರೀ ಯೋಗೇಶ್ವರಾನಂದ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನೆರವೇರಿತು.
ಸಮ್ಮಿಲನದಲ್ಲಿ ರಾಜ್ಯ ಪಂಚಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ. ರೇವಣ್ಣ, ಮಾಜಿ ಸಚಿವ ಬಂಡೆಪ್ಪ ಖಾಶ್ಯಂಪೂರ್, ಮಾಜಿ ಶಾಸಕ ಹುಲಿನಾಯ್ಕರ್, ಶಿಕ್ಷಣ ತಜ್ಞ ಹಾಗೂ ಯುವ ನಾಯಕ ಬಿ.ಜಿ. ವಿನಯಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಉದ್ಯಮಶೀಲತೆಯ ಮಹತ್ವ, ಸ್ವಾವಲಂಬಿ ಬದುಕಿನ ಅಗತ್ಯತೆ ಹಾಗೂ ಯುವಜನರಲ್ಲಿ ಉದ್ಯಮ ಮನೋಭಾವ ಬೆಳೆಸುವ ಕುರಿತಂತೆ ಮಾತನಾಡಿದರು.
ಉದ್ಯಮ ಕ್ಷೇತ್ರದಲ್ಲಿ ಹಾಲುಮತ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು, ಸರ್ಕಾರದ ವಿವಿಧ ಯೋಜನೆಗಳು ಮತ್ತು ಉದ್ಯಮಾವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ವಕ್ತಾರರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಟಿ.ಬಿ. ಬೆಳಗಾವಿ, ಡಾ. ಲೀಲಾ, ರುದ್ರಣ್ಣ ಗುಳಗುಳಿ, ಸಿದ್ದಲಿಂಗ ಪೂಜಾರಿ, ಗ್ಯಾನಪ್ಪ ಹುಡೇದ್, ಸುನೀಲ್ ಜಯರಾಜ್ ಸೇರಿದಂತೆ ಅನೇಕ ಸಮಾಜದ ಮುಖಂಡರು, ಉದ್ಯಮಿಗಳು ಹಾಗೂ ಯುವಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.