
ನವದೆಹಲಿ, 24 ಮೇ (ಹಿ.ಸ.) :
ಆ್ಯಂಕರ್ : ಆಫ್ರಿಕಾ ಖಂಡದಲ್ಲಿ ಮರುಕಳಿಸುತ್ತಿರುವ ಎಬೋಲಾ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಎದುರಿಸಲು ಭಾರತ ಮಹತ್ವದ ಮಾನವೀಯ ನೆರವಿನ ಹೆಜ್ಜೆ ಇಟ್ಟಿದೆ. ಎಬೋಲಾ ನಿಯಂತ್ರಣ ಮತ್ತು ತಡೆ ಕಾರ್ಯಗಳಿಗೆ ಬೆಂಬಲವಾಗಿ ಭಾರತ ಸರ್ಕಾರವು ತುರ್ತು ವೈದ್ಯಕೀಯ ಸರಬರಾಜು ಸಾಮಗ್ರಿಗಳು ಹಾಗೂ ರಕ್ಷಣಾತ್ಮಕ ಕಿಟ್ಗಳ ಮೊದಲ ಕಂತನ್ನು ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಿಗೆ ರವಾನಿಸಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಜಾಗತಿಕ ಆರೋಗ್ಯ ಭದ್ರತೆ, ಮಾನವೀಯ ಸಹಕಾರ ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ತತ್ವಗಳಿಗೆ ಭಾರತ ಬದ್ಧವಾಗಿದೆ ಎಂದು ತಿಳಿಸಿದೆ.
ಆಫ್ರಿಕಾದಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ವೈದ್ಯಕೀಯ ಉಪಕರಣಗಳು, ವೈಯಕ್ತಿಕ ರಕ್ಷಣಾ ಸಾಮಗ್ರಿಗಳು, ಪರೀಕ್ಷಾ ಸಾಮಗ್ರಿಗಳು ಹಾಗೂ ತುರ್ತು ಆರೋಗ್ಯ ಉಪಕರಣಗಳನ್ನು ಈ ನೆರವಿನ ಭಾಗವಾಗಿ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ಎಬೋಲಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ಹಲವು ಆಫ್ರಿಕಾ ರಾಷ್ಟ್ರಗಳು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸೋಂಕು ತಡೆ, ಚಿಕಿತ್ಸೆ ಹಾಗೂ ಆರೋಗ್ಯ ಸಿಬ್ಬಂದಿಯ ಸುರಕ್ಷತೆ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ಭಾರತ ನೀಡುತ್ತಿರುವ ನೆರವು ಆಫ್ರಿಕಾ ರಾಷ್ಟ್ರಗಳಿಗೆ ಮಹತ್ವದ ಬೆಂಬಲವಾಗಲಿದೆ ಎಂದು ಅಂದಾಜಿಸಲಾಗಿದೆ.
ಕೊವಿಡ್-19 ಅವಧಿಯಲ್ಲಿಯೂ ಭಾರತ ಅನೇಕ ರಾಷ್ಟ್ರಗಳಿಗೆ ಲಸಿಕೆ, ಔಷಧಿ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಿ “ವಿಶ್ವದ ಔಷಧಾಲಯ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಎಬೋಲಾ ವಿರುದ್ಧದ ಹೋರಾಟದಲ್ಲಿಯೂ ಭಾರತ ತನ್ನ ಜಾಗತಿಕ ಹೊಣೆಗಾರಿಕೆಯನ್ನು ಮುಂದುವರಿಸುತ್ತಿದೆ.
ವಿದೇಶಾಂಗ ಇಲಾಖೆ, “ಮಾನವೀಯ ಸಹಕಾರ ಮತ್ತು ಆರೋಗ್ಯ ಕ್ಷೇತ್ರದ ಜಾಗತಿಕ ಪಾಲುದಾರಿಕೆಯಲ್ಲಿ ಭಾರತ ಸದಾ ಮುಂಚೂಣಿಯಲ್ಲಿರುತ್ತದೆ” ಎಂದು ಪುನರುಚ್ಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.