ಇಟಾನಗರ, 20 ಜುಲೈ (ಹಿ.ಸ.) :
ಆ್ಯಂಕರ್ : ಕಳೆದ ಕೆಲವು ವಾರಗಳಿಂದ ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿಯವರೆಗೆ ಕನಿಷ್ಠ 15 ಜನರು ಮೃತಪಟ್ಟಿದ್ದು, 36,000ಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ.
ಲೋವರ್ ಸಿಯಾಂಗ್, ಪಶ್ಚಿಮ ಸಿಯಾಂಗ್, ಅಪ್ಪರ್ ಸುಬನ್ಸಿರಿ, ಮತ್ತು ಕೇಯಿ ಪನ್ಯೋರ್ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಹಲವೆಡೆ ಹೆದ್ದಾರಿಗಳು ಮುಚ್ಚಲ್ಪಟ್ಟಿವೆ. ಇತ್ತೀಚೆಗೆ ಅಂಜಾವ್ ಜಿಲ್ಲೆಗೆ ರಸ್ತೆ ಸಂಪರ್ಕ ಪುನಃ ಸ್ಥಾಪನೆಯಾಗಿದೆ.
ಮಳೆಯಿಂದಾಗಿ ಭತ್ತದ ಗದ್ದೆಗಳು, ಮನೆಗಳು, ಅಂಗಡಿ ಮತ್ತು ಸಾರ್ವಜನಿಕ ಆಸ್ತಿಗಳು ಹಾನಿಗೊಳಗಾಗಿವೆ. ರಾಜಧಾನಿ ಇಟಾನಗರ ಸೇರಿದಂತೆ ನಹರ್ಲಗುನ್, ನಿರ್ಜುಲಿ, ಬಂದರ್ದೇವ ಪ್ರದೇಶಗಳಲ್ಲೂ ಪರಿಸ್ಥಿತಿ ತೀವ್ರವಾಗಿದೆ.
ಮುಖ್ಯಮಂತ್ರಿ ಪೆಮಾ ಖಂಡು ಅವರು ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದು, ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa