ಕುಷ್ಟಗಿ, 8 ಜೂನ್ (ಹಿ.ಸ):
ಆ್ಯಂಕರ್: ಕುಷ್ಟಗಿ ತಾಲೂಕಿನ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಬರುವ ಬಿಜಕಲ್ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಪೂರೈಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಪಾಂಡೆಯ ಅವರು ತಿಳಿಸಿದ್ದಾರೆ.
ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಆರೋಗ್ಯ ಶಿಬಿರ ನಡೆಸಿ ಜನರಿಗೆ ಚಿಕಿತ್ಸೆ ಮತ್ತು ಔಷಧಿ ವಿತರಣೆ ಮಾಡಲಾಗಿದೆ. ಗ್ರಾಮದ ಪ್ರತಿಯೊಬ್ಬರು ಕಾಯಿಸಿ ಅರಿಸಿದ ನೀರನ್ನು ಕುಡಿಯಲು ಡಂಗೂರ ಬಾರಿಸಿ ಮನೆಮನೆಗೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸಲಾಗಿದೆ.
ಕಲುಷಿತಗೊಂಡ ಕುಡಿಯುವ ನೀರಿನ ಮೂಲಗಳನ್ನು ನಾಶಗೊಳಿಸಲಾಗಿದೆ. ಓವರ್ ಟ್ಯಾಂಕ್, ಸಂಪು ಮತ್ತು ನೀರಿನ ತೊಟ್ಟಿಗಳನ್ನು ಶುಚಿಗೊಳಿಸಲಾಗಿದೆ. ಕುಡಿಯವ ನೀರಿನ ಪೈಪುಗಳು ಲಿಕೇಜ್ ಆಗದಂತೆ ನೋಡಿಕೊಳ್ಳಲಾಗಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಅಲಕನಂದಾ ಮಳಗಿ ಹಾಗೂ ಅವರ ತಂಡವು ಜೂನ್ 08ರಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಜಕಲ್ ಗ್ರಾಮದಲ್ಲಿ ಒಟ್ಟು 61 ವಾಂತಿ ಭೇದಿ ಪ್ರಕರಣಕಳು ವರದಿಯಾಗಿರುತ್ತವೆ. ಜೂನ್ 08ರಂದು ವರದಿಯಾದ 13 ಪ್ರಕರಣಗಳಲ್ಲಿ 8 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು 5 ರೋಗಿಗಳು ಪ್ರಾಥಮಿಕ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.
ಇಲ್ಲಿಯವರೆಗೆ ಒಟ್ಟು 61 ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 52 ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿರುತ್ತಾರೆ. ಉಳಿದ 8 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಜೂನ್ 05ರಂದು ತಾತ್ಕಾಲಿಕ ಚಿಕಿತ್ಸೆ ಶಿಬಿರ ಹಮ್ಮಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಚಿಕಿತ್ಸೆ ಫಲಕಾರಿಯಾಗದೇ ಸಾವು: ಜೂನ್ 07ರಂದು ಬಿಜಕಲ್ ಗ್ರಾಮದ 10 ವರ್ಷದ ಕುಮಾರಿ ನಿರ್ಮಲಾ ತಂದೆ ಈರಪ್ಪ ನೀರಲೂಟಿ ಇವಳ ತಂದೆ ತಾಯಿ ದುಡಿಯಲು ಬೆಂಗಳೂರಿಗೆ ಗುಳೆ ಹೋಗಿದ್ದರಿಂದ ಇವಳನ್ನು ಮಗುವಿನ ಸಂಬಂಧಿಕರ (ಅತ್ತೆ) ಮನೆಯಲ್ಲಿ ಬಿಟ್ಟಿದ್ದರು.
ಇವಳು ರಾತ್ರಿ 10 ಗಂಟೆಗೆ ಊಟ ಮಾಡಿದ್ದು ಬಳಿಕ ರಾತ್ರಿ ಸುಮಾರು 11.30ಕ್ಕೆ ಒಂದು ಸಾರಿ ವಾಂತಿ ಮತ್ತು ಒಂದು ಸಾರಿ ಬೇಧಿಯಾಗಿರುತ್ತದೆ. ಹುಡುಗಿಯು ಈ ವಿಷಯವನ್ನು ತನ್ನ ಅತ್ತೆಗೆ ತಿಳಿಸಿದಾಗ ಅವಳ ಅತ್ತೆಯು ಮಾನಸಿಕವಾಗಿ ಸದೃಢವಾಗಿರದ ಕಾರಣ ಏನು ಆಗುವುದಿಲ್ಲ ಬೆಳಿಗ್ಗೆ ಆಸ್ಪತ್ರೆ ಹೋಗೋಣ ಎಂದು ತಿಳಿಸಿರುತ್ತಾರೆ.
ಆ ಬಳಿಕ ಬೆಳಿಗ್ಗೆ 8 ಗಂಟೆಗೆ ತೀವ್ರ ತರಹದ ವಾಂತಿ ಮತ್ತು ಭೇದಿಯಾಗಿ ಮಗುವು ಮನೆಯಲ್ಲಿಯೆ ಮಲಗಿದ್ದಾಗ ಆಶಾ ಕಾರ್ಯಕರ್ತೆಯು ಮನೆಮನೆ ಭೇಟಿಗೆ ಹೋದಾಗ ಮಗುವನ್ನು ನೋಡಿ ಪಕ್ಕದ ಮನೆಯವರ ಸಹಾಯದಿಂದ ಬಿಜಕಲ್ ಗ್ರಾಮದಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ಅಲ್ಲಿಯ ಸಿಬ್ಬಂದಿಯವರು ಮಗುವನ್ನು ತಪಾಸಣೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿ ತಾಲೂಕು ಆಸ್ಪತ್ರೆ ಕುಷ್ಟಗಿಗೆ ಕಳುಹಿಸಿದ್ದಾರೆ.
ಕುಷ್ಟಗಿ ಆಸ್ಪತ್ರೆಗೆ ತಲುಪವಷ್ಟರಲ್ಲಿಯೆ ಮಗುವು ಅಸ್ಥವ್ಯಸ್ತಗೊಂಡಿದ್ದರಿಂದ ಅಲ್ಲಿಯೆ ವೈದ್ಯರು ಚಿಕಿತ್ಸೆ ನೀಡಿದರು. ಚಿಕಿತ್ಸೆ ಫಲಕಾರಿಯಾಗದೇ ಆ ಹುಡಗಿಯು ಅಸುನಿಗಿರುತ್ತಾಳೆಂದು ವೈದ್ಯಾಧಿಕಾರಿಗಳು ವರದಿ ನೀಡಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸಿಇಓ ಅವರು ತಿಳಿಸಿದ್ದಾರೆ.