ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ): ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಪಾದರ್ಪಣೆ ಮಾಡಿದ್ದರು. ಈ ಚಿತ್ರ ತಕ್ಕಮಟ್ಟಿಗೆ ಯಶಸ್ವಿಯೂ ಆಯಿತು.
ಬಳಿಕ ಅವರು, ಯಾವುದೇ ಚಿತ್ರ ನಿರ್ದೇಶಿಸದಿದ್ದರೂ, ಕನ್ನಡ ಚಿತ್ರರಂಗದೊಂದಿಗಿನ ಅವರ ಒಡನಾಟ ಚೆನ್ನಾಗಿಯೇ ಇದೆ. ಕಳೆದ ವರ್ಷ ಕಬ್ಜ ಚಿತ್ರದ ಪೋಸ್ಟರ್ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದ ಅವರು, ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ನೋಡಿ ಮೆಚ್ಚಿದ್ದರು.
ಈಗ ಆರ್ಜಿವಿ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈ ಬಾರಿ ಉಪೇಂದ್ರ ಅಭಿನಯಿಸಲಿರುವ ಚಿತ್ರವೊಂದಕ್ಕೆ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನೋ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.
ಉಪೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗಿವೆ. ಈ ಚಿತ್ರವನ್ನು ಎ ಸ್ಕ್ವೇರ್ ಪ್ರೊಡಕ್ಷನ್ಸ್ನಡಿ ದಾವಣಗೆರೆಯ ರಾಜ್ ಯಜಮಾನ್ ನಿರ್ಮಿಸುತ್ತಿದ್ದಾರೆ. ಇದು ಈ ಸಂಸ್ಥೆಯ ಮೊದಲ ಚಿತ್ರವಾಗಿರಲಿದೆ.
ಉಪೇಂದ್ರ ಅಭಿನಯದ ಚಿತ್ರವನ್ನು ಆರ್ಜಿವಿ ನಿರ್ದೇಶಿಸುತ್ತಾರೆ ಎಂಬುದು ನಿಜವಾದರೆ, ಯಾವಾಗ ಎಂಬುದು ತಿಳಿದುಬಂದಿಲ್ಲ. ಸದ್ಯಕ್ಕೆ ಉಪೇಂದ್ರ ಅವರು ಲಗಾಮ್ ಮತ್ತು ಕಬ್ಜ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇವೆರೆಡೂ ಚಿತ್ರಗಳು ಪೂರ್ತಿಯಾಗುವುದಕ್ಕೆ ಇನ್ನೂ ಮೂರು ತಿಂಗಳಾದರೂ ಬೇಕು. ಇದಲ್ಲದೆ, ಉಪೇಂದ್ರ ಕೈಯಲ್ಲಿ ಇನ್ನೊಂದಿಷ್ಟು ಚಿತ್ರಗಳಿವೆ. ಇನ್ನೊಂದು ಕಡೆ ಆರ್ಜಿವಿ ಸದ್ಯ ಯಾವುದೇ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿಲ್ಲ.
ಉಪೇಂದ್ರ ಬಿಡುವಾಗುವುದರೊಳಗೆ, ಅವರು ಕಥೆ-ಚಿತ್ರಕಥೆ ರೆಡಿ ಮಾಡಿಟ್ಟುಕೊಂಡು, ಮುಂದಿನ ವರ್ಷದಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ. ಸದ್ಯಕ್ಕಂತೂ ಚಿತ್ರತಂಡದವರಿಂದ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಹಿಂದೂಸ್ತಾನ್ ಸಮಾಚಾರ್.ಎಂ.ಎಸ್.ಯ.ಮ