ನ್ಯಾಯಾಧೀಶರಾದ ಹೆಚ್ ಎ ಸಾತ್ವಿಕ್ ರಿಮ್ಸ್‍ಗೆ ದಿಢೀರ್ ಭೇಟಿ
ರಾಯಚೂರು, 20 ಜುಲೈ (ಹಿ.ಸ.) : ಆ್ಯಂಕರ್ : ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯ ಬೋಧಕ ಆಸ್ಪತ್ರೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಆಗಿರುವ ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ
ನ್ಯಾಯಾಧೀಶರಾದ ಹೆಚ್ ಎ ಸಾತ್ವಿಕ್ ರಿಮ್ಸ್‍ಗೆ ದಿಢೀರ್ ಭೇಟಿ


ನ್ಯಾಯಾಧೀಶರಾದ ಹೆಚ್ ಎ ಸಾತ್ವಿಕ್ ರಿಮ್ಸ್‍ಗೆ ದಿಢೀರ್ ಭೇಟಿ


ನ್ಯಾಯಾಧೀಶರಾದ ಹೆಚ್ ಎ ಸಾತ್ವಿಕ್ ರಿಮ್ಸ್‍ಗೆ ದಿಢೀರ್ ಭೇಟಿ


ರಾಯಚೂರು, 20 ಜುಲೈ (ಹಿ.ಸ.) :

ಆ್ಯಂಕರ್ : ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯ ಬೋಧಕ ಆಸ್ಪತ್ರೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಆಗಿರುವ ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್. ಎ. ಸಾತ್ವಿಕ್ ಅವರು ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಹತ್ತಿರದ ಕೋರ್ಟ್ ಆವರಣದಿಂದ ಹೊರಟು ಮಧ್ಯಾಹ್ನ 2.40ರ ಸುಮಾರಿಗೆ ನೇರವಾಗಿ ರಿಮ್ಸಗೆ ಆಗಮಿಸಿದ ನ್ಯಾಯಾಧೀಶರು, ಆಸ್ಪತ್ರೆಯ ಬೇರೆ ಬೇರೆ ವಿಭಾಗಗಳಿಗೆ ಭೇಟಿ ನೀಡಿದರಲ್ಲದೇ, ಆಸ್ಪತ್ರೆಯ ಪ್ರಾಂಗಣದಲ್ಲಿ ಕುಳಿತಿದ್ದ ರೋಗಿಗಳೊಂದಿಗೆ ಮಾತನಾಡಿ ಅವರ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಕೇಳಿ ಮಾಹಿತಿ ಪಡೆದರು.

ಮೊದಲಿಗೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗಕ್ಕೆ ತೆರಳಿ ಅಲ್ಲಿದ್ದ ನರ್ಸ್ ಸಿಬ್ಬಂದಿಗೆ ಡ್ಯೂಟಿ ಡಾಕ್ಟರ್ ಎಲ್ಲಿದ್ದಾರೆ ಎಂದು ಕೇಳಿದರು. ವೈದ್ಯರು, ಆಪರೇಷನ್ ಥೇಟರ್‍ನಿಂದ ಆಗಮಿಸಿ ಇದೀಗ ಊಟಕ್ಕೆ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಮಕ್ಕಳ ಹೊರರೋಗಿಗಳ ವಿಭಾಗಕ್ಕೆ ತೆರಳಿ ಅಲ್ಲಿ ವೈದ್ಯರು ಇರುವುದನ್ನು ನ್ಯಾಯಾಧೀಶರು ಖಚಿತಪಡಿಸಿಕೊಂಡರು.

ಬಳಿಕ ಎಲುವು ಮತ್ತು ಕೀಲು ವಿಭಾಗಕ್ಕೆ ತೆರಳಿದಾಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಎಂಬಿಬಿಎಸ್ ಇಂಟರ್ನಿಗಳು ರೋಗಿಯೊಬ್ಬರಿಗೆ ಪ್ಲಾಸ್ಟರ್ ಹಾಕುತ್ತಿರುವುದನ್ನು ಗಮನಿಸಿ, ಯಾಕೆ ವೈದ್ಯರಿಲ್ಲವೇ? ಸಂಬಂಧಿಸಿದ ವೈದ್ಯರು ಇಲ್ಲದೇ ಪ್ಲಾಸ್ಟರ್ ಹಾಕಿ ರೋಗಿಗೆ ಏನಾದರು ಹೆಚ್ಚುಕಮ್ಮಿಯಾದರೆ ಯಾರು ಹೊಣೆ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ವೈದ್ಯರು ಎಲ್ಲಿದ್ದಾರೆ? ಎಂದು ಕೇಳಿದರು.

ಬಳಿಕ ನ್ಯಾಯಾಧೀಶರು ಕಿವಿ-ಮೂಗು-ಗಂಟಲು (ಇಎನ್‍ಟಿ) ವಿಭಾಗ ಮತ್ತು ನೇತ್ರ ವಿಜ್ಞಾನ ವಿಭಾಗಗಳಿಗೆ ತೆರಳಿದಾಗ ಎರಡೂ ಕಡೆಗಳಲ್ಲೂ ವೈದ್ಯರು ಇರಲಿಲ್ಲ. ಎರಡೂ ಕಡೆಗಳಲ್ಲಿಯೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಎಂಬಿಬಿಎಸ್ ಇಂಟರ್ನಿಗಳೇ ರೋಗಿಗಳನ್ನು ನೋಡುತ್ತಿರುವುದನ್ನು ನ್ಯಾಯಾಧೀಶರು ಖಚಿತಪಡಿಸಿಕೊಂಡರು. ಇಷ್ಟೊತ್ತಿನವರೆಗೆ ವೈದ್ಯರು ಇದ್ದರು ಇದೀಗ ಊಟಕ್ಕೆ ತೆರಳಿದ್ದಾರೆ ಎಂದು ಇಎನ್‍ಟಿ ಮತ್ತು ನೇತ್ರ ವಿಜ್ಞಾನ ವಿಭಾಗದಲ್ಲಿದ್ದ ಎಂಬಿಬಿಎಸ್ ಇಂಟರ್ನಿಗಳು ಪ್ರತಿಕ್ರಿಯಿಸಿದರು. ಬಳಿಕ ನ್ಯಾಯಾಧೀಶರು, ಚರ್ಮರೋಗ ವಿಭಾಗಕ್ಕೆ ತೆರಳಿದಾಗ ಅಲ್ಲಿಯು ಸಹ ವೈದ್ಯರು ಕಾಣಿಸದೇ ಇರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಇದೆ ವೇಳೆ, ನ್ಯಾಯಾಧೀಶರ ಬಳಿಗೆ ಆಗಮಿಸಿದ ನೇತ್ರ ವಿಜ್ಞಾನ ವಿಭಾಗದ ವೈದ್ಯರೊಬ್ಬರು ತಾವು ಕೆಲಸದ ಮೇಲೆ ಒಪೆಕ್ ಆಸ್ಪತ್ರೆಗೆ ಹೋಗಿದ್ದಾಗಿ ಹೇಳಿದರು.

ಜನರಲ್ ಸರ್ಜರಿ ವಿಭಾಗದಲ್ಲಿ ಒಬ್ಬ ವೈದ್ಯರು ರಜೆ ಮೇಲೆ ತೆರಳಿರುವುದನ್ನು ಮತ್ತೊಬ್ಬ ವೈದ್ಯರು ಊಟದ ಅವಧಿ ಮೂಗಿದರೂ ಬಾರದೇ ಇರುವುದನ್ನು ನ್ಯಾಯಾಧೀಶರು ತಿಳಿದುಕೊಂಡರು.

ಈ ಆಸ್ಪತ್ರೆಗೆ ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳೇ ಹೆಚ್ಚಾಗಿ ಬರುತ್ತಾರೆ. ಈ ಜನರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಎಲ್ಲ ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರಬೇಕು. ಊಟಕ್ಕೆ ತೆರಳಿದ್ದಲ್ಲಿ ಬೇಗನೇ ಕರ್ತವ್ಯಕ್ಕೆ ಆಗಮಿಸಬೇಕು. ವೈದ್ಯರಿಗಾಗಿ ರೋಗಿಗಳು ಕಾಯುತ್ತಿರುತ್ತಾರೆ ಎಂಬುದರ ಬಗ್ಗೆ ಪ್ರತಿಯೊಬ್ಬ ವೈದ್ಯರು ಅರಿಯಬೇಕು. ಜನರಿಗೆ ಯಾವುದೇ ಕಾರಣಕ್ಕು ತೊಂದರೆಯಾಗಬಾರದು ಎಂಬುದು ನಮ್ಮ ಕಾಳಜಿಯಾಗಿದೆ. ರಾಯಚೂರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯ ಬೋಧಕ ಆಸ್ಪತ್ರೆಯ ಬಗ್ಗೆ ಜನರಿಗೆ ವಿಶ್ವಾಸ ಬರುವ ಹಾಗೆ ಎಲ್ಲ ವೈದ್ಯರು ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಧೀಶರು ಸ್ಥಳದಲ್ಲಿದ್ದ ಆಸ್ಪತ್ರೆಯ ಅಧಿಕಾರಿಗಳಿಗೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಉಪ ವೈದ್ಯಕೀಯ ಅಧೀಕ್ಷಕರಾದ ಡಾ.ಅರವಿಂದ ಸಂಗಾವಿ, ಆಸ್ತಿ ವಿಭಾಗದ ಅಧಿಕಾರಿ ಬಸವರಾಜ, ಮಕ್ಕಳ ತಜ್ಞ ವೈದ್ಯರಾದ ಡಾ.ಗೋಪಾಲ, ಮಕ್ಕಳ ಹೊರರೋಗಿ ವಿಭಾಗದ ಡಾ.ಪ್ರಕಾಶ ಹಾಗೂ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande