ಗದಗ, 19 ಜುಲೈ (ಹಿ.ಸ.) :
ಆ್ಯಂಕರ್ : ಇಟ್ಟರೆ ಶಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ನೀನಾರಿಗಾದೆಯೋ ಮಾನವ ಇಂದು ಇದು ಬದಲಾವಣೆಯಾಗಿದೆ. ಮಾನವನ ಎಲ್ಲಾ ಅಂಗಾಂಗಗಳು ಸತ್ತ ನಂತರವು ಉಪಯೋಗಕ್ಕೆ ಬರುತ್ತವೆ. ಬದುಕಿದ್ದಾಗಲೇ ಮನಸ್ಸು ಮಾಡಬೇಕು. ದೇಹದಾನ ಮಾಡಿದ ಕೌತಾಳ ವೀರಪ್ಪನವರ ಬದುಕು ಸಾರ್ಥಕವಾದುದು ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2754 ನೇ ಶಿವಾನುಭವದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ದೇಹದಾನ ಇದೊಂದು ಸಮಾಜ ಸೇವೆ. ದೇಹದಾನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರದ ಅಧ್ಯಯನಕ್ಕಾಗಿ ಅನುಕೂಲವಾಗುತ್ತದೆ. ವಿಜ್ಞಾನದ ಪ್ರಗತಿಗೆ, ವೈದ್ಯಕೀಯ ಸಂಶೋಧನೆಗೆ ದೇಹದಾನ ಮುಖ್ಯವಾಗಿದೆ ಎಂದು ಆಶೀರ್ವಚನ ನೀಡಿದರು.
ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಡಿ.ಜಿ.ಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಸ್.ಬಿ. ಗೋವಿಂದಪ್ಪ ಮಾತನಾಡಿ, ಮರಣಾನಂತರ ದೇಹದಾನ ಹಾಗೂ ಅಂಗಾಂಗ ದಾನ ವಿಷಯ ಕುರಿತು ಮಾತನಾಡುತ್ತಾ, ಮರಣಾನಂತರ ವ್ಯಕ್ತಿಯ ಶರೀರ ಉಪಯೋಗವಾದರೆ ಅವನೆ ಉತ್ತಮ ಮಾನವ. ಎಲ್ಲಾ ದಾನಗಳಿಗಿಂತ ದೇಹದಾನ ಮುಖ್ಯ. ದೇಹದಾನ ಮಾಡಿದ ವ್ಯಕ್ತಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಕಣ್ಣು, ಮೆದುಳು ಹೀಗೆ ಮಾನವನ 26 ಅಂಗಾಂಗ ಉಪಯೋಗಕ್ಕೆ ಬರುತ್ತವೆ ಎಂದು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ಜಿ ಬಿ ಪಾಟೀಲ್ ಮಾತನಾಡಿದರು. 2017 ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಎಂ ಸಿ ಐಲಿ ಮಾತನಾಡಿದರು. ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಶ್ರೀಮತಿ ಸವಿತಾ ಕುಪ್ಪಸದ ನೆರವೇರಿಸಿದರು.
ಧಾರ್ಮಿಕ ಗ್ರಂಥ ಪಠಣವನ್ನು ಹರ್ಷಿತಾ ಬಿ ಬಳಿಗೇರ ಹಾಗೂ ವಚನ ಚಿಂತನವನ್ನು ರಕ್ಷೀತಾ ಬಿ ಬಳಿಗೇರ ಮಾಡಿದರು. ದಾಸೋಹ ಸೇವೆಯನ್ನು ವೈಜನಾಥ ಕೌತಾಳ ಹಾಗೂ ಕುಟುಂಬ ವರ್ಗ ಹಾಗೂ 2017 ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಎಂ ಸಿ ಐಲಿ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಐ ಬಿ ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Lalita MP