ವಿಜಯಪುರ, 19 ಜುಲೈ (ಹಿ.ಸ.) :
ಆ್ಯಂಕರ್ : ಪತ್ರಕರ್ತರ ಸಕಲ ಸಮಸ್ಯೆ ನಿವಾರಣೆಗಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಪ್ರಾಮಾಣಿಕವಗಿ ಪ್ರಯತ್ನ ಮಾಡುವ ಜೊತೆಗೆ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಐದು ಲಕ್ಷ ರೂ.ಗಳ ಠೇವಣಿ ಇರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಘೋಷಿಸಿದರು.
ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಪತ್ರಕರ್ತರ ಆರೋಗ್ಯಕ್ಕಾಗಿ ಠೇವಣಿ ಇರಿಸಿ ಎಂಬ ಮನವಿಗೆ ವೇದಿಕೆಯಲ್ಲಿಯೇ ಸ್ಪಂದಿಸಿ ಸಚಿವ ಪಾಟೀಲ ಠೇವಣಿ ಇರಿಸುವ ಭರವಸೆ ನೀಡಿದರು.
ನಂತರ ಸಂದೇಶ ಮುಂದುವರೆಸಿದ ಸಚಿವ ಪಾಟೀಲರು, ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಚಳವಳಿಯಲ್ಲಿ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಪತ್ರಿಕೋದ್ಯಮ ನಾಲ್ಕನೇಯ ಸ್ತಂಭವಾಗಿ ಮಹತ್ವದ ಪಾತ್ರ ವಹಿಸುತ್ತಲೇ ಬಂದಿದೆ ಎಂದರು.
ಈಗ ಡಿಜಿಟಿಲ್ ಮಿಡಿಯಾ ಕಾಲ, ಮೊಬೈಲ್ ಪರದೆಯಲ್ಲಿಯೇ ಅಂತಾರಾಷ್ಟ್ರೀಯ ಪತ್ರಿಕೆ, ಟಿವಿ ವೀಕ್ಷಿಸಬಹುದು, ಉಳಿದ ದೇಶಗಳಲ್ಲಿ ಮುದ್ರಣ ಮಾಧ್ಯಮಗಳು ಸಂಪೂರ್ಣ ಕ್ಷೀಣಿಸಿವೆ, ಕೃತಕ ಬುದ್ಧಿಮತ್ತೆ ಪತ್ರಿಕೋದ್ಯಮಕ್ಕೂ ಸಹ ಪರಿಣಾಮ ಬೀರಿದೆ, ಈ ಎಲ್ಲ ಸವಾಲುಗಳನ್ನು ಎದುರಿಸಬೇಕಿದೆ ಎಂದರು.
ಪತ್ರಕರ್ತರಿಗೆ, ರಾಜಕಾರಣಿ, ಪೊಲೀಸರಿಗೆ ರವಿವಾರ ಇಲ್ಲವೇ ಇಲ್ಲ, ಅಷ್ಟೊಂದು ಕಾರ್ಯ ಒತ್ತಡ ಈ ಕ್ಷೇತ್ರಗಳ ಮೇಲಿವೆ ಎಂದರು. ಡಾ.ಫ.ಗು. ಹಳಕಟ್ಟಿ ಅವರು ಆರಂಭಿಸಿದ ನವ ಕರ್ನಾಟಕ ಪತ್ರಿಕೆ ಕರ್ನಾಟಕ ಏಕೀಕರಣಕ್ಕೆ ಬಹುದೊಡ್ಡ ಕೊಡುಗೆ ನೀಡಿತು, ಆ ಮೂಲಕ ವಿಜಯಪುರ ಜಿಲ್ಲೆ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಅನನ್ಯ, ಸಂಯುಕ್ತ ಕರ್ನಾಟಕದ ಅನನ್ಯ ಚೇತನ ಮೊಹರೆ ಹನುಮಂತರಾಯರು, ವಿ.ಬಿ. ನಾಯಕರು, ಟಿ.ಕೆ. ನಾಯಕರು ಹೀಗೆ ಅನೇಕ ಪತ್ರಕರ್ತರು ಪತ್ರಿಕೋದ್ಯಮಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ವೈಜ್ಞಾನಿಕ, ಸಂಶೋಧನಾತ್ಮಕ ಬರಹಗಳು ಮೂಡಿಬರಲಿ
ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ವೈಜ್ಞಾನಿಕ ಹಾಗೂ ಸಂಶೋಧನಾತ್ಮಕ ಬರವಣಿಗೆಗಳು ಇಲ್ಲದೇ ಇರುವುದರಿಂದ ಸಮಾಜಕ್ಕೆ ಅನೇಕ ರೀತಿಯ ಹಿನ್ನಡೆಯಾಗಿದೆ, ಈ ನಿಟ್ಟಿನಲ್ಲಿ ಸಂಶೋಧನಾತ್ಮಕ, ವೈಜ್ಞಾನಿಕ ನೆಲೆಗಟ್ಟಿನ ವಿಚಾರಗಳು ಪ್ರಸಾರಗೊಳ್ಳಬೇಕಿದೆ ಎಂದರು.
ದೃಶ್ಯ ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ ಪ್ರಥಮಾದ್ಯತೆಯಾಗಿ ಪ್ರಗತಿ ಎರಡನೇಯ ಆದ್ಯತೆಯಾಗಿದೆ, ಆದರೆ ಪತ್ರಿಕೆಗಳಿಗೆ ಪ್ರಗತಿ ವಿಷಯವೇ ಅಗ್ರವಾಗಿರುವುದು ಸಂತೋಷದ ಸಂಗತಿ ಎಂದರು.
ಡಾ.ಫ.ಗು. ಹಳಕಟ್ಟಿ, ಮೊಹರೆ ಹನುಮಂತರಾಯರು ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು. ಶಿವನ ಮೂರನೇಯ ಕಣ್ಣಿನಂತೆ ಪತ್ರಕರ್ತರು ಸಹ ಸಮಾಜದ ನಾಲ್ಕನೇಯ ಕಣ್ಣು ಇದ್ದಂತೆ, ಸಮಾಜದ ಸಮಸ್ಯೆಗಳ ನಿವಾರಣೆಗಾಗಿ ಪತ್ರಕರ್ತರು ಕಣ್ಣು ತೆರೆಯಬೇಕು ಎಂದರು.
ರಾಜ್ಯ ಸರ್ಕಾರ ಪತ್ರಕರ್ತರ ಹಿತರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಠೇವಣಿ ಇರಿಸುವ ಕಾರ್ಯಕ್ಕೆ ನಾನು ಕೈ ಜೋಡಿಸುವೆ ಎಂದು ಐದು ಲಕ್ಷ ರೂ.ಗಳ ಠೇವಣಿ ಇರಿಸುವುದಾಗಿ ಘೋಷಿಸಿದರು.
ಇಬ್ಬರು ಸಚಿವರಿಂದ ವಿಜಯಪುರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ತಲಾ ಐದು ಲಕ್ಷ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಹಣ ನೀಡುವುದಾಗಿ ಘೋಷಿಸಿದ್ದಾರೆ.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ .ಬಿ ಪಾಟೀಲ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲವರು ಜಿಲ್ಲೆಯ ಪತ್ರಕರ್ತರಿಗೆ ತಮ್ಮ ವೈಯಕ್ತಿಕವಾಗಿ ತಲಾ 5 ಲಕ್ಷ ಹಣವನ್ನು ಬ್ಯಾಂಕಿನಲ್ಲಿ ಎಫ್ ಡಿ ಮಾಡಿ ಆ ಹಣದಲ್ಲಿ ಬರುವ ಆದಾಯದಲ್ಲಿ ಜಿಲ್ಲೆಯ ಪತ್ರಕರ್ತರ ಸಮಸ್ಯೆಯನ್ನು ಪರಿಹರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಾನ್ಯತೆ ಇಲ್ಲದ ಪತ್ರಕರ್ತರಿಗೂ ಮಾಧ್ಯಮ ಸಂಜೀವಿನಿ
ಮಾನ್ಯತೆ ಇಲ್ಲದ ಪತ್ರಕರ್ತರಿಗೂ ಮಾಧ್ಯಮ ಸಂಜೀವಿನಿ ವಿಸ್ತರಿಸಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಮನವಿ ಮಾಡಿಕೊಂಡರು.
ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಪತ್ರಕರ್ತರ ಆರೋಗ್ಯ ರಕ್ಷಣೆ ಅಭಯ ತುಂಬುವಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ವರದಾನವಾಗಿದೆ, ಮಾನ್ಯತೆ ಪಡೆದ ಪತ್ರಕರ್ತರಿಗೆ ಈ ಯೋಜನೆ ಜಾರಿಯಾಗಿದ್ದು, ಮಾನ್ಯತೆ ಇಲ್ಲದವರು ಸಹ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಅವರಿಗೂ ಈ ಯೋಜನೆ ವಿಸ್ತರಿಸಿ ಎಂದರು.
ಜ್ಞಾನಸ್ಥ, ನ್ಯಾಯಾಧೀಶ ಸ್ಥಾನದಲ್ಲಿ ನಿಂತು ಸಮಾಜದ ನಂಬಿಕೆಯನ್ನು ಪತ್ರಕರ್ತ ಉಳಿಸಬೇಕಿದೆ, ಆದರೆ ಇತ್ತೀಚಿನ ದಿನಗಳಲ್ಲಿ
ನಾನು ಪತ್ರಕರ್ತ ಎಂದು ಹೇಳುವವರ ಸಂಖ್ಯೆ ಅಧಿಕವಾಗಿದೆ, ಸುಳ್ಳು, ಜೊಳ್ಳು ಕ್ರಿಮಿನಲ್, ಬ್ಲಾಕ್ ಮೇಲ್ ಮಾಡುವ ನಕಲಿ ಪತ್ರಕರ್ತರ ಹಾವಳಿ ಸಹ ಅಧಿಕವಾಗಿದ್ದು, ಇದಕ್ಕೆ ಕಡಿವಾಣ ಹಾಕಿ ನೈಜ ಪತ್ರಕರ್ತರನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಹ ಸಂಘದ ಮೇಲಿದೆ ಎಂದರು.
ಪತ್ರಿಕಾ ವೃತ್ತೀಯ ಮೌಲ್ಯಗಳ ಶ್ರೇಯಾಂಕದಲ್ಲಿ ನಾವು ೧೫೧ ಸ್ಥಾನದಲ್ಲಿರುವುದು ಕಳವಳಕಾರಿಯಾದ ಸಂಗತಿ, ಏತನ್ಮಧ್ಯೆ ಇಂದಿನ ಪತ್ರಿಕೋದ್ಯಮ ಹೇಳಿಕೆ, ಪ್ರತಿ ಹೇಳಿಕೆಯ ಸ್ಟೆಟಮೆಂಟ್ ಓರಿಯಂಟೇಷನ್ ಸೀಮಿತವಾಗುತ್ತಿರುವುದು ಸಹ ನೋವಿನ ಸಂಗತಿ, ಪತ್ರಕರ್ತ ತಾನು ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ಮಹಾತ್ಮಾ ಗಾಂಧೀಜಿ, ಡಾ.ಅಂಬೇಡ್ಕರ್ ಸತ್ಯಕ್ಕಾಗಿ ಪತ್ರಿಕೋದ್ಯಮವನ್ನು ಮೀಸಲಾಗಿರಿಸಿದ್ದರು ಎಂದರು.
ಯಾವ ಸುದ್ದಿ ಕೊಡಬೇಕು, ಯಾವ ಸುದ್ದಿ ಕೊಡಬಾರದು ಎಂದು ಹೃದಯದಲ್ಲಿ ನ್ಯಾಯಾಧೀಶರಾಗಿ ಅದನ್ನು ಸಮರ್ಥವಾಗಿ ನಿರ್ಣಯಿಸಬೇಕು ಎಂದರು. ಪತ್ರಕರ್ತರ ವೃತ್ತಿ ಧಾವಂತಪೂರ್ಣ, ಈ ಧಾವಂತದ ನಡುವೆಯೂ ವೃತ್ತಿ ಬದ್ಧತೆಯನ್ನು ನಿಭಾಯಿಸಿ ಮುನ್ನಡೆಯಬೇಕಿದೆ ಎಂದರು.
ಗ್ರಾಮೀಣ ಪತ್ರಕರ್ತರು ಸರ್ಕಾರದ ಗಮನ ಸೆಳೆಯಲಿ
ಗ್ರಾಮೀಣ ಪತ್ರಕರ್ತರ ಸವಾಲುಗಳ ಕುರಿತು ಉಪನ್ಯಾಸ ಮಂಡಿಸಿದ ಹಿರಿಯ ಪತ್ರಕರ್ತ ಗೋಪಾಲ ನಾಯಕ ಮಾತನಾಡಿ,
ಗ್ರಾಮೀಣ ಭಾಗದಲ್ಲೂ ಸಹ ಪತ್ರಿಕೋದ್ಯಮ ವಿಶಾಲವಾಗಿ ವ್ಯಾಪಿಸಿದೆ, ಗ್ರಾಮೀಣ ಪತ್ರಕರ್ತರು ತಮ್ಮ ಭಾಗದ ದೇವಾಲಯ, ಅಪೂರ್ವ ಸ್ಮಾರಕಗಳ ಇತಿಹಾಸವನ್ನು ಸಂಶೋಧಿಸಿ ಪ್ರಕಟಿಸಿ ಅವುಗಳನ್ನು ಪ್ರವಾಸೋದ್ಯಮ ಕ್ಷೇತ್ರಗಳನ್ನಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ತಮ್ಮ ಗ್ರಾಮಕ್ಕೆ ಯಾವ ಕೈಗಾರಿಕೆ ಬರಬೇಕು, ಯಾವ ಯೋಜನೆ ಬರಬೇಕು ಎಂಬ ಬಗ್ಗೆ ಬೆಳಕು ಚೆಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದರು.
ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ಯಡಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಪರ್ತಕರ್ತರ ಸಂಚಾರಕ್ಕೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿರುವ ಸರ್ಕಾರದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತರು ಜೀವನ ಮೇಲ್ನೋಟಕ್ಕೆ ಸರಿ ಕಂಡರೂ ಸಹ ಅನೇಕ ತೊಂದರೆಯನ್ನು ಪರ್ತಕರ್ತರು ಎದುರಿಸುತ್ತಿದ್ದಾರೆ ಎಂದರು.
ಪತ್ರಿಕೋದ್ಯಮ ಇತಿಹಾಸ, ಪತ್ರಕರ್ತರ ತಲ್ಲಣಗಳ ಕುರಿತು ವಿವರಿಸಿದರು.
ಸಚಿವರಾದ ಡಾ.ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಡಿ.ವೈ.ಎಸ್.ಪಿ. ಬಸವರಾಜ ಯಲಿಗಾರ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ,
ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಪ್ರಮುಖರಾದ ಭವಾನಿಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಶೆಟಗಾರ, ಕಾನಿಪ ಪ್ರಮುಖರಾದ ಕೆ.ಕೆ. ಕುಲಕರ್ಣಿ, ಕೌಶಲ್ಯ ಪನಾಳಕರ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಗುರು ಲೋಕೋರೆ ಪ್ರಾರ್ಥಿಸಿದರು. ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಇಂದುಶೇಖರ ಮಣ್ಣೂರ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande