
ವಿಜಯಪುರ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದ ಆರು ಜನ ಎಂದುರಿಸುತ್ತಿದ್ದ ಆರು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಸಂಸ್ಥಯೆ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಹಣಕಾಸು ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ರವಿವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಆರು ಜನ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಕೋರ್ಸಿನ ಪ್ರಥಮ ವರ್ಷದ ಬೋಧನಾ ಶುಲ್ಕ, ಊಟ ಮತ್ತು ವಸತಿ(ಹಾಸ್ಟೇಲ್ ಮತ್ತು ಮೆಸ್)ಕ್ಕೆ ಅಗತ್ಯವಾಗಿರುವ ಹಣದ ಚೆಕ್ ನ್ನು ವಿತರಿಸಿದರು.
ಬಳಿಕ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ತಮ್ಮ ಶಿಕ್ಷಣಕ್ಕೆ ಅಗತ್ಯವಾಗಿರುವ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಪೋಷಕರು, ತಮ್ಮ ಊರು ಮತ್ತು ಬಸವನಾಡು ವಿಜಯಪುರ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿ ಶುಭ ಹಾರೈಸಿದರು. ಆರು ಜನ ವಿದ್ಯಾರ್ಥಿಗಳಿಗೆ ಒಟ್ಟು ರೂ. 10,61,390 ಮೊತ್ತದ ಚೆಕ್ ನ್ನು ಸಚಿವರು ವಿತರಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟಾರ್ ಆರ್. ವಿ. ಕುಲಕರ್ಣಿ ಮತ್ತು ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್. ಎಸ್. ಪಾಟೀಲ ಉಪಸ್ಥಿತರಿದ್ದರು.
*ಸಚಿವರಿಂದ ಆರ್ಥಿಕ ನೆರವು ಪಡೆದ ವಿದ್ಯಾರ್ಥಿಗಳ ಹಿನ್ನೆಲೆ*
1. ಬಬಲೇಶ್ವರ ತಾಲೂಕಿನ ಹಲಗಣಿ ಗ್ರಾಮದ ವಿದ್ಯಾರ್ಥಿ *ಸುದೀಪ ಬಸವರಾಜ ಬಾವಲತ್ತಿ* ನೀಟ್ ನಲ್ಲಿ 43481ನೇ ಸ್ಥಾನ ಪಡೆದಿದ್ದಾರೆ. ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂ.ಬಿ.ಬಿ.ಎಸ್ ಪ್ರವೇಶ ಪಡೆದಿದ್ದಾರೆ. ಇವರ ತಂದೆ ಅನಾರೋಗ್ಯ ಪೀಡಿತರಾಗಿದ್ದು, ತಾಯಿ ಮನೆಗೆಲಸ ಮಾಡುತ್ತಿದ್ದಾರೆ. ಬಬಲೇಶ್ವರ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದಿರುವ ಈ ವಿದ್ಯಾರ್ಥಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಯಲ್ಲಟ್ಟಿಯಲ್ಲಿರುವ ಕೊಣ್ಣೂರ ಪಿಯು ಕಾಲೇಜಿನಯಲ್ಲಿ ದ್ವಿತೀಯ ಪಿಯುಸಿ ಪಾಸಾಗಿದ್ದಾರೆ. ಇವರ ಅಕ್ಕ ಬಿ. ಎ. ಓದುತ್ತಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ ರೂ. 1,54,150 ಚೆಕ್ ನ್ನು ವಿತರಿಸಲಾಯಿತು.
2. ತಿಟೋಟಾ ಪಟ್ಟಣದ ಸಚೀನ *ಭೀಮಣ್ಣ ಮಾಳಿ* ನೀಟ್ ನಲ್ಲಿ 75173 ಸ್ಥಾನ ಪಡೆದಿದ್ದು, ಇವರ ತಂದೆ ಭೀಮಣ್ಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಸವಿತಾ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿ ಬಾಗಲಕೋಟೆಯ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಇವರಿಗೆ ಇಬ್ಬರು ತಂಗಿಯರಿದ್ದಾರೆ. ಎಸ್.ಎಸ್.ಎಲ್.ಸಿ ಯನ್ನು ಬಾಬಾನಗರದ ಸ್ವಾಮಿ ವಿವೇಕಾನಂದ ಮಾಡೆಲ್ ಸ್ಕೂಲ್ ನಲ್ಲಿ ಓದಿರುವ ಈ ವಿದ್ಯಾರ್ಥಿ ಪಿಯುಸಿಯನ್ನು ವಿಜಯಪುರ ನಗರದ ಎಕ್ಸಲೆಂಟ್ ಕಾಲೇಜಿನಲ್ಲಿ ಓದಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ ರೂ. 1,56,621 ಚೆಕ್ ನ್ನು ವಿತರಿಸಲಾಯಿತು.
3. ತಿಕೋಟಾ ತಾಲೂಕಿನ ಬಾಬಾನಗರದ ವಿದ್ಯಾರ್ಥಿನಿ *ಪ್ರತೀಕ್ಷಾ ಗಣಪತಿ ಶಿಂದೆ* ನೀಟ್ ನಲ್ಲಿ 175450 ಸ್ಥಾನ ಪಡೆದಿದ್ದು, ಇವರ ತಂದೆ ಗಣಪತಿ ಕಾರ್ಮಿಕರಾಗಿದ್ದರೆ, ತಾಯಿ ಸುನಂದಾ ಮನೆಗೆಲಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿ ಮಂಗಳೂರಿನ ಕುಂತಿಕಾನಾ ಎ. ಜೆ. ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಕೊಲ್ಹಾರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದಿರುವ ಈ ವಿದ್ಯಾರ್ಥಿನಿ, ವಿಜಯಪುರ ನಗರದ ಚೈತನ್ಯ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿದ್ದಾರೆ. ಈ ವಿದ್ಯಾರ್ಥಿನಿಗೆ ಇಬ್ಬರು ಸಹೋದದರಿದ್ದು, ಅವರೂ ಕೂಡ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ ರೂ. 2,51,571 ಚೆಕ್ ನ್ನು ವಿತರಿಸಲಾಯಿತು.
4. ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮದ *ಸಂದೇಶ ಶಿವಾಜಿ ನಂದ್ಯಾಳ* ನೀಟ್ ಪರೀಕ್ಷೆಯಲ್ಲಿ 162446 ಸ್ಥಾನ ಪಡೆದಿದ್ದು, ಹಾವೇರಿಯ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸ್ ನಲ್ಲಿ ಎಂ.ಬಿ.ಬಿ.ಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಇವರ ತಂದೆ ಶಿವಾಜಿ ಕೃಷಿಕರಾಗಿದ್ದು, ತಾಯಿ ಯಶೋದಾ ಮನೆಗೆಲಸ ಮಾಡುತ್ತಿದ್ದಾರೆ. ಇವರ ಅಕ್ಕ ಅಕ್ಕ ಬಿಎಸ್ಸಿ ಓದುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದಿದ್ದು, ಜಮಖಂಡಿಯ ರಾಯಲ್ ಪ್ಯಾಲೇಸ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ ರೂ. 1,48,400 ಚೆಕ್ ನ್ನು ವಿತರಿಸಲಾಯಿತು.
5. ವಿಜಯಪುರ ತಾಲೂಕಿನ ನಾಗಠಾಣದ ವಿದ್ಯಾರ್ಥಿನಿ *ಭವಾನಿ ಬಗಲಿ* ನೀಟ್ ಪರೀಕ್ಷೆಯಲ್ಲಿ 100195 ಸ್ಥಾನ ಪಡೆದಿದ್ದು, ಇವರ ತಂದೆ ಮಲ್ಲಿಕಾರ್ಜುನ ಮತ್ತು ತಾಯಿ ಮಲ್ಲಮ್ಮ ಕೃಷಿಕರಾಗಿದ್ದಾರೆ. ವಿಜಯಪುರ ನಗರದ ಎಕ್ಸಲೆಂಟ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪಾಸಾಗಿರುವ ಈ ವಿದ್ಯಾರ್ಥಿನಿಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿರುವ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಸೀಟು ಸಿಕ್ಕಿದೆ. ಈಕೆಯ ಅಕ್ಕ ಮತ್ತು ಅಣ್ಣ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ ರೂ. 1,40,000 ಚೆಕ್ ನ್ನು ವಿತರಿಸಲಾಯಿತು.
6. ತಿಕೋಟಾ ತಾಲೂಕಿನ ಹಂಚಿನಾಳ ಎಲ್.ಟಿ.-3ರ ವಿದ್ಯಾರ್ಥಿ *ರೋಹಿತ ರಾಠೋಡ ನೀಟ್* ನಲ್ಲಿ 110929 ಸ್ಥಾನ ಪಡೆದಿದ್ದು, ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಸೀಟು ಪಡೆದಿದ್ದಾರೆ. ಇವರ ತಂದೆ ಅಶೋಕ ನಿಧನರಾಗಿದ್ದು, ತಾಯಿ ಸುನೀತಾ ತಮ್ಮ ಹಿರಿಯ ಪುತ್ರನೊಂದಿಗೆ ವಿಜಯಪುರ ನಗರದಲ್ಲಿ ಚಹ ಅಂಗಡಿ ನಡೆಸುತ್ತಿದ್ದಾರೆ. ವಿಜಯಪುರ ನಗರದ ಗೀತಾಂಜಲಿ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಶಾಂತಿನಿಕೇತನ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿರುವ ಈ ವಿದ್ಯಾರ್ಥಿಯ ಅಣ್ಣ ಕೂಡ ತಾಯಿಯ ಜೊತೆ ಚಹ ಅಂಗಡಿ ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ ರೂ. 2,10,638 ಚೆಕ್ ನ್ನು ಸಚಿವರು ವಿತರಿಸಿದರು.
*ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು*.
ಎಂ.ಬಿ.ಬಿ.ಎಸ್ ಓದಿ ವೈದ್ಯರಾಗುವ ತಮ್ಮ ಕನಸು ನನಸಾಗಲು ಕಾರಣರಾದ ಸಚಿವ ಎಂ. ಬಿ. ಪಾಟೀಲ ಅವರ ನೆರವಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೃತಜ್ಞತೆ ಸಲ್ಲಿಸಿದರು. ಸಚಿವರು ದೇವರ ರೂಪದಲ್ಲಿ ಬಂದು ನನಗೆ ನೆರವಾಗಿದ್ದಾರೆ. ಇಲ್ಲದಿದ್ದರೆ ನಾನು ವೈದ್ಯಕೀಯ ಶಿಕ್ಷಣ ಓದಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ನಮ್ಮ ಮಕ್ಕಳ ಕನಸು ನನಸಾಗಲು ಸಚಿವರು ಮಾಡಿರುವ ಸಹಾಯದಿಂದ ಮನತುಂಬಿ ಬಂದಿದೆ. ಅವರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಕಾಗುವುದಿಲ್ಲ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande