



ಬಳ್ಳಾರಿ, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಕೃತಿ ವಿಕೋಪಗಳು, ಮಾನವ ನಿರ್ಮಿತ ಅವಘಡ ಹಾಗೂ ಇತರೆ ಯಾವುದೇ ಸಂಕಷ್ಟದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ ಸೇವೆ ಅನನ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಝುಬೇರ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತದ ಸಹಕಾರದಲ್ಲಿ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬೆಂಗಳೂರು ಹಾಗೂ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಕುಡತಿನಿ ಇವರ ಸಹಯೋಗದಲ್ಲಿ ಬಿಟಿಪಿಎಸ್ನ ಶೀಥಲೀಕರಣ ಗೋಪುರ-3ರ ಬಳಿ ಶುಕ್ರವಾರ ನಡೆದ ಕಟ್ಟಡ ಕುಸಿತದ ಆನ್ ಸೈಟ್ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಾಣಿಜ್ಯ ಉದ್ದಿಮೆಗಳು, ಕಾರ್ಖಾನೆಗಳಂತಹ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಆಕಸ್ಮಿಕವಾಗಿ ಸಂಭವಿಸುವ ಕಟ್ಟಡ ಕುಸಿತದ ಸಂದರ್ಭವು ಅತ್ಯಂತ ಕ್ಲಿಷ್ಟಕರ. ಅಂತಹ ಸಂದರ್ಭದಲ್ಲಿಯು ಸಹ ಅವರು ತಮ್ಮ ಆತ್ಮವಿಶ್ವಾಸದೊಂದಿಗೆ ಕರ್ತವ್ಯ ನಿರ್ವಹಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ವಿವಿಧ ಇಲಾಖೆಗಳ ಪರಸ್ಪರ ಸಹಯೋಗದ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.
ಬಳ್ಳಾರಿಯ ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರು, ನೈಸರ್ಗಿಕ ವಿಪತ್ತು, ಮಾನವ ನಿರ್ಮಿತ ಅವಘಡ ಸಂಭವಿಸಿದಾಗ ತಕ್ಷಣ ಕಾರ್ಯ ಪ್ರವತ್ತವಾಗುವ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯು ನಾಗರಿಕರ ಜೀವ ರಕ್ಷಿಸುವಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ ಎಂದು ಶ್ಲಾಘಿಸಿದರು.
ಕೇಂದ್ರ ವಿಪತ್ತು ನಿರ್ವಹಣಾ ಪಡೆಯ ಇನ್ಸ್ ಪೆಕ್ಟರ್ ರಾಮ್ ಭಜ್ ಅವರು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಎಂಬುದು ವಿಪತ್ತು ನಿರ್ವಹಣಾ ಕಾಯ್ದೆ, 2005 ರಡಿ ಸ್ಥಾಪಿತವಾದ ಭಾರತದ ವಿಶೇಷ ಸಂಸ್ಥೆಯಾಗಿದ್ದು, ವಿಪತ್ತುಗಳು ಸಂಭವಿಸಿದಾಗ ತ್ವರಿತ ಮತ್ತು ಪರಿಣಾಮಕಾರಿ ಮೂಲಕ ಭಾಗಿಯಾಗಿ ಪರಿಹಾರ ಒದಗಿಸುತ್ತದೆ ಎಂದು ತಿಳಿಸಿದರು.
.
ಅಣಕು ಪ್ರದರ್ಶನ ಆರಂಭದಲ್ಲಿ ಕಟ್ಟಡ ಕುಸಿತವಾದ ಸಂದರ್ಭದಲ್ಲಿ ಕೂಡಲೇ ಒಳಗಿರುವ ಸಾರ್ವಜನಿಕರು, ಕಾರ್ಮಿಕರನ್ನು ಹೊರಬರುವಂತೆ ಎಚ್ಚರಿಕೆ ಗಂಟೆ ನೀಡುವ ಮೂಲಕ ಸುರಕ್ಷಿತ ಸ್ಥಳಕ್ಕೆ ಬಂದು ಹಾಜರಾಗುವ ವಿಧಾನ, ಆ ದಿನದಂದು ಹಾಜರಾದ ಕಾರ್ಮಿಕರ ಹಾಜರಾತಿ, ಯಾವ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಬಳಿಕ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ವಿಧಾನ ಕುರಿತು ಪ್ರಾತ್ಯಕ್ಷಿಕೆ ತೋರಿಸಿಕೊಡಲಾಯಿತು.
ಅಪಘಾತದಲ್ಲಿ ರಕ್ತಸ್ರಾವವಾದಾಗ ತಡೆಗಟ್ಟುವ ಕ್ರಮ ಸೇರಿದಂತೆ ಪ್ರಥಮ ಚಿಕಿತ್ಸೆಯ ಬಗ್ಗೆ ವಿವರಿಸಲಾಯಿತು. ಬೆಂಕಿ, ಅನಿಲ ದುರಂತಗಳಲ್ಲಿ ಇತರರ ಜೀವ ಕಾಪಾಡುವಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಸುರಕ್ಷಿತ ಜಾಗಕ್ಕೆ ತೆರಳಲು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ವಿಪತ್ತು ನಿರ್ವಹಣೆ ವೇಳೆ ಪಡೆ ಬಳಸುವ ವಿವಿಧ ಪರಿಕರಗಳ ಪರಿಚಯ ಮಾಡಲಾಯಿತು.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಅಧಿಕಾರಿಯ ಕಮಾಂಡೋ ಮೂಲಕ ಹೆಚ್ಆರ್ಡಿ ತಂಡ, ಅಗ್ನಿಶಾಮಕ ತಂಡ, ಆರೋಗ್ಯ ಸಿಬ್ಬಂದಿ ತಂಡ, ಹುಡುಕು ಮತ್ತು ರಕ್ಷಣಾ ತಂಡ, ಘಟನೆ ನಿರ್ವಹಣಾಧಿಕಾರಿ, ಮಾಹಿತಿ ತಂಡ ಮತ್ತು ಕೆಎಸ್ಐಎಸ್ಎಫ್ ತಂಡದ ಸಿಬ್ಬಂದಿ ತಾವು ಕೈಗೊಳ್ಳಲಿರುವ ಸೇವೆಗಳ ಕುರಿತು ಅಚ್ಚುಕಟ್ಟಾಗಿ ಅಣಕು ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.
ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಉದಯ ನಾಯ್ಕ.ಎನ್., ವಿವಿಧ ವಿಭಾಗಗಳ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ಜ್ಯೋತಿಲಕ್ಷ್ಮಿ ಸಿ.ಎನ್., ಅಶೋಕ್ ಬೊಮ್ಮನಹಳ್ಳಿ, ಅಶೋಕ್.ಹೆಚ್., ತೋರಣಗಲ್ಲು ಉಪವಿಭಾಗದ ಡಿವೈಎಸ್ಪಿ ಪ್ರಸಾದ್ ಗೋಖಲೆ, ಕಾರ್ಖಾನೆ ಮತ್ತು ಬಾಯ್ಲರುಗಳ ಹಿರಿಯ ಸಹಾಯಕ ನಿರ್ದೇಶಕ ವರುಣ್ ಕುಮಾರ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಿಣಿತ ಪರಮೇಶ್ವರ್, ಬಿಟಿಪಿಎಸ್ ನ ಸುರಕ್ಷತಾ ಇಂಜಿನಿಯರ್ ಪ್ರಕಾಶ್ ಸೇರಿದಂತೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಬಿಟಿಪಿಎಸ್ ನ ಅಧಿಕಾರಿ-ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್