
ಬಳ್ಳಾರಿ, 12 ನವೆಂಬರ್ (ಹಿ.ಸ.)
ಆ್ಯಂಕರ್ : ಲಿಂಗತ್ವ ಅಲ್ಪಸಂಖ್ಯಾತೆ ಸುಕನ್ಯಾ ಅವರ ಮೇಲೆ ಬೆಂಗಳೂರಿನಲ್ಲಿ ಅಮಾನುಷವಾಗಿ ಹಲ್ಲೆ ಮಾಡಿ, ತಲೆ ಬೋಳಿಸಿ ಅವಮಾನ ಮಾಡಿರುವುದು ಖಂಡನೀಯ ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವ ಚಳವಳಿ ಸಂಸ್ಥೆ ತೀವ್ರವಾಗಿ ಖಂಡಿಸಿದೆ.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಸಂಘಟನೆಯ ಮುಖಂಡರಾದ ವೀಣಾ ಅವರು, ಭಾರತ ದೇಶದಲ್ಲಿ ಒಟ್ಟು ಏಳು ಹಿಜ್ರ ಧರ್ಮದ ಮನೆಗಳಿವೆ. ಹಿಜ್ರಾ ಧರ್ಮದಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವುದು ಸರ್ವೆ ಸಾಮಾನ್ಯ. ಅದೇ ರೀತಿಯಾಗಿ ಬೆಂಗಳೂರಿನ ಕೃಷ್ಣರಾಜಪುರಂನಲ್ಲಿ ವಾಸವಿದ್ದ ಸುಕನ್ಯಾ ಎಂಬ ಲೈಂಗಿಕ ಅಲ್ಪಸಂಖ್ಯಾತೆ ಒಂದು ಮನೆಯನ್ನು ಬಿಟ್ಟು ಇನ್ನೊಂದು ಮನೆಗೆ ಹೋಗಿದ್ದಕ್ಕೆ ಲಿಂಗತ್ವ ಅಲ್ಪಸಂಖ್ಯಾತರಿಂದಲೇ ಈ ದುರ್ಘಟನೆ ನಡೆದಿರುವುದು ಅಮಾನವೀಯ ಎಂದು ಸಂಘಟನೆಯ ಮುಖಂಡರು ತಿಳಿಸಿದರು.
ಸುಕನ್ಯಾಳ ಮೇಲೆ ಹಲ್ಲೆ ಮಾಡಿ, ಅಮಾನುಷವಾಗಿ ವರ್ತಿಸಿ ಜೀವಬೆದರಿಕೆ ಹಾಕಿರುವವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ರೀತಿಯ ಘಟನೆಗಳು ಪದೇ ಪದೇ ಮರುಕಳಿಸುವ ಸಾಧ್ಯತೆಗಳಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಲಿಂಗತ್ವ ಅಲ್ಪಸಂಖ್ಯಾತರರಾದ ಶಿವಾನಿ, ರಾಜಮ್ಮ, ದಿವ್ಯ, ಭವಾನಿ, ಅಶ್ವಿನಿ, ರಾಜೇಶ್ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್